ಮಂಗಳೂರು: 2014 ರ ಲೋಕಸಭಾ ಚುನಾವಣೆಗೂ ಮುನ್ನ ದೇಶವನ್ನು ನೋಡುವ ದೃಷ್ಟಿ ಬೇರೆಯಾಗಿತ್ತು, ಈಗ ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಜಗತ್ತು ಭಾರತವನ್ನು ನೋಡುವ ದೃಷ್ಟಿಯೇ ಬದಲಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಮಂಗಳೂರಿನಲ್ಲಿ ತಿರಂಗಾ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿರುವ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಸೇನೆ ಬಲಿಷ್ಠಗೊಳ್ಳುತ್ತಿದೆ. ಗಡಿ ಪ್ರದೇಶದಲ್ಲಿ ಉಗ್ರರ ದಾಳಿಗೆ ಪ್ರತಿ ದಾಳಿ ನಡೆಸಲು ದೆಹಲಿಯಿಂದ ಆದೇಶಕ್ಕಾಗಿ ಕಾಯದೇ, ಬಂದೂಕಿನಿಂದ ಉತ್ತರ ನೀಡಲಾಗುತ್ತಿದೆ ಎಂದು ಅಮಿತ್ ಶಾ ತಿಳಿಸಿದ್ದಾರೆ.
ದೇಶವಿರೋಧಿ ಘೋಷಣೆಗಳ ಬಗ್ಗೆಯೂ ಮಾತನಾಡಿರುವ ಅಮಿತ್ ಶಾ, ದೇಶದ ಕೆಲವೆಡೆ ದೇಶವಿರೋಧಿ ಘಟನೆಗಳು ನಡೆಯುತ್ತಿದೆ, ಕೆಲವರು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ, ದೇಶ ಪ್ರೇಮವನ್ನು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ ವಿರುದ್ಧ ಮಾತನಾಡಲು ಉಪಯೋಗಿಸಬಾರದು ಎಂದು ಅಮಿತ್ ಶಾ ಅಭಿಪ್ರಾಯಪಟ್ಟಿದ್ದಾರೆ. ದೇಶಪ್ರೇಮವನ್ನು ಪ್ರಶ್ನಿಸುತ್ತಿರುವವರು ದೇಶದ ಇತಿಹಾಸವನ್ನು ಅರಿಯಲಿ, ರಾಷ್ಟ್ರವಾದದ ಕಲ್ಪನೆ ದೇಶವನ್ನು ಒಗ್ಗೂಡಿಸುವ ಲಕ್ಷಣ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದೇಶದ ವಿರುದ್ಧ ಉಪಯೋಗಿಸಬಾರದು ಎಂದು ಅಮಿತ್ ಶಾ ಹೇಳಿದ್ದಾರೆ. ಇನ್ನು ಅಮಿತ್ ಶಾ ಭೇಟಿಯನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.
Advertisement