ನೈಸರ್ಗಿಕ ಅನಿಲ ಆಧಾರಿತ ಆರ್ಥಿಕ ವ್ಯವಸ್ಥೆ ಭಾರತದ ಪ್ರಾಮುಖ್ಯತೆ: ನರೇಂದ್ರ ಮೋದಿ

ನೈಸರ್ಗಿಕ ಅನಿಲ ಆಧಾರಿತ ಆರ್ಥಿಕತೆಯತ್ತ ಮುಖಮಾಡಲು, ಇಂಧನ ಸ್ಥಳೀಯ ಉತ್ಪಾದನೆ...
ದೆಹಲಿಯಲ್ಲಿ ಪೆಟ್ರೋಟೆಕ್-2016 ಇಂಧನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ
ದೆಹಲಿಯಲ್ಲಿ ಪೆಟ್ರೋಟೆಕ್-2016 ಇಂಧನ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಪ್ರಧಾನಿ
ನವದೆಹಲಿ: ನೈಸರ್ಗಿಕ ಅನಿಲ ಆಧಾರಿತ ಆರ್ಥಿಕತೆಯತ್ತ ಮುಖಮಾಡಲು, ಇಂಧನದ
ಸ್ಥಳೀಯ ಉತ್ಪಾದನೆ ಹೆಚ್ಚಿಸಲು ಮತ್ತು ಇಂಧನವನ್ನು ಆಮದು ಮಾಡಿಕೊಳ್ಳಲು ಮೂಲಸೌಕರ್ಯಗಳನ್ನು ಸೃಷ್ಟಿಸಲು ಭಾರತ ಪ್ರಾಮುಖ್ಯತೆ ನೀಡುತ್ತಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಪೆಟ್ರೋಟೆಕ್-2016 ಇಂಧನ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ನೈಸರ್ಗಿಕ ಅನಿಲ ಮುಂದಿನ ಜನಾಂಗದ ಪಳೆಯುಳಿಕೆ ಇಂಧನವಾಗಲಿದ್ದು, ಅಗ್ಗದ ಮತ್ತು ಕಡಿಮೆ ಮಾಲಿನ್ಯವುಳ್ಳದ್ದಾಗಿದೆ. ನೈಸರ್ಗಿಕ ಅನಿಲ ಉತ್ಪಾದನೆಯನ್ನು ಹೆಚ್ಚಿಸಿ, ಹೆಚ್ಚುತ್ತಿರುವ ಸ್ಥಳೀಯ ಬೇಡಿಕೆಗಳನ್ನು ಈಡೇರಿಸಲು ನೈಸರ್ಗಿಕ ಅನಿಲ ಆಮದಿಗೆ ಮೂಲಭೂತ ಸೌಕರ್ಯಗಳನ್ನು ಸೃಷ್ಟಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.
ಭಾರತದ ಆರ್ಥಿಕತೆ: 2040ರ ವೇಳೆಗೆ ಭಾರತದ ಆರ್ಥಿಕತೆ 5 ಪಟ್ಟು ಹೆಚ್ಚಾಗಲಿದ್ದು, ಉತ್ಪಾದನೆ, ಸಾಗಾಟ, ನಾಗರಿಕ ವಿಮಾನಯಾನ ಮತ್ತು ಇತರ ವಲಯಗಳಲ್ಲಿ ಬೆಳವಣಿಗೆಯಾಗಲಿದೆ ಎಂದು ಕೂಡ ಹೇಳಿದರು.
ಜಾಗತಿಕ ಆರ್ಥಿಕತೆ ಅನಿಶ್ಚಿತತೆಯತ್ತ ಸಾಗುತ್ತಿರುವ ಸಂದರ್ಭದಲ್ಲಿ ಭಾರತ ಪ್ರಚಂಡ ಸ್ಥಿತಿಸ್ಥಾಪಕತ್ವವನ್ನು ತೋರಿಸುತ್ತಿದೆ. ಬೇರೆ ದೇಶಗಳಿಗಿಂತ ಭಾರತದ ಆರ್ಥಿಕತೆ ಹೆಚ್ಚು ಸ್ಥಿರವಾಗಿದ್ದು ಇಲ್ಲಿ ಹೂಡಿಕೆ ಅತ್ಯುನ್ನತ ಮಟ್ಟದಲ್ಲಿದೆ. ದೇಶದ ಚಾಲ್ತಿ ಖಾತೆ ಕೊರತೆ ಹಂತ ಹಂತವಾಗಿ ಸುಧಾರಿಸಿದೆ ಎಂದರು.
ರೈಲು ಸಂಪರ್ಕಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಪ್ರಾಮುಖ್ಯತೆ ನೀಡುತ್ತಿದೆ. ಸಮರ್ಪಿತ ಸರಕು ಕಾರಿಡಾರ್, ಸಗರ್ಮಲ ಹೈವೇ ಮತ್ತು ಜಲಮಾರ್ಗಗಳ ಹಡಗು ಯೋಜನೆಗಳ ಬಗ್ಗೆ ಸರ್ಕಾರ ಕಾರ್ಯತತ್ಪರವಾಗಿದೆ ಎಂದರು. ದೇಶದ ಬಡಜನರಿಗೆ ಸುಲಭವಾಗಿ ದೊರಕುವ ಇಂಧನವನ್ನು ಪೂರೈಸಲು ಭಾರತ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದರು.
2018ರ ವೇಳೆಗೆ ದೇಶದ ಎಲ್ಲಾ ಜನರಿಗೆ ವಿದ್ಯುತ್ ಒದಗಿಸುವುದು ಸರ್ಕಾರದ ಗುರಿಯಾಗಿದ್ದು, ಮುಂದಿನ 5 ವರ್ಷಗಳಲ್ಲಿ ಪೈಪ್ ಲೈನ್ ಗಳ ಮೂಲಕ 30 ಸಾವಿರ ಕಿಲೋ ಮೀಟರ್ ಉದ್ದದವರೆಗೆ 10 ದಶಲಕ್ಷ ಜನರಿಗೆ ನೈಸರ್ಗಿಕ ಅನಿಲ ಸಂಪರ್ಕ ಒದಗಿಸುವ ಉದ್ದೇಶ ಸರ್ಕಾರದ ಮುಂದಿದೆ. ಕಡಿಮೆ ಅಭಿವೃದ್ಧಿ ಹೊಂದಿದ ಪೂರ್ವ ಪ್ರಾಂತ್ಯಗಳಿಗೆ ನೈಸರ್ಗಿಕ ಅನಿಲವನ್ನು ಪೈಪ್ ಗಳ ಮೂಲಕ ಒದಗಿಸುವ ಯೋಜನೆಯಿದೆ. ಇದರಿಂದ ಉದ್ಯೋಗ ಸೃಷ್ಟಿಯೂ ಆಗುತ್ತದೆ ಎಂದರು.
ತೈಲ ಆಮದನ್ನು ಕಡಿಮೆ ಮಾಡಿ ಸ್ಥಳೀಯ ತೈಲ ಮತ್ತು ಅನಿಲ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯಿದೆ. 2022ರ ವೇಳೆಗೆ ತೈಲ ಆಮದನ್ನು ಶೇಕಡಾ 10ರಷ್ಟು ತಗ್ಗಿಸಿ ಸ್ಥಳೀಯ ಉತ್ಪಾದನೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸಲಾಗುವುದು ಎಂದರು. 2040ರ ವೇಳೆಗೆ ಇಡೀ ಯುರೋಪ್ ರಾಷ್ಟ್ರಗಳಿಗಿಂತ ಭಾರತ ಹೆಚ್ಚು ತೈಲವನ್ನು ಬಳಸಲಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಧಾನಿ, ಭಾರತದ ತೈಲ ಮತ್ತು ಅನಿಲ ವಲಯಗಳಲ್ಲಿ ವಿದೇಶಿ ಕಂಪೆನಿಗಳು ಹೂಡಿಕೆ ಮಾಡುವಂತೆ ಆಹ್ವಾನಿಸಿದರು. ಜಾಗತಿಕ ಹೈಡ್ರೋಕಾರ್ಬನ್ ಕಂಪೆನಿಗಳು ಮೇಕ್ ಇನ್ ಇಂಡಿಯಾದಡಿ ಹೂಡಿಕೆ ಮಾಡಿ ಎಂದು ಅವರು ಕರೆ ನೀಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com