ಮಮತಾ ಬ್ಯಾನರ್ಜಿ ವಿಮಾನ ಹಾರಾಟ ವಿವಾದ: 6 ಪೈಲಟ್ ಗಳು ಅಮಾನತು

ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದ ಪಶ್ಚಿಮ ಬಂಗಾಳ ವಿಮಾನ ಹಾರಾಟ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಪೈಲಟ್ ಗಳನ್ನು ಅಮಾನತು ಮಾಡಿರುವುದಾಗಿ ಬುಧವಾರ ತಿಳಿದುಬಂದಿದೆ...
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ನವದೆಹಲಿ: ಸಾಕಷ್ಟು ವಿವಾದಕ್ಕೆ ಗುರಿಯಾಗಿದ್ದ ಪಶ್ಚಿಮ ಬಂಗಾಳ ವಿಮಾನ ಹಾರಾಟ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಪೈಲಟ್ ಗಳನ್ನು ಅಮಾನತು ಮಾಡಿರುವುದಾಗಿ ಬುಧವಾರ ತಿಳಿದುಬಂದಿದೆ.

ವಿಮಾನದಲ್ಲಿ ಇಂಧನ ಕಡಿಮೆಯಿದೆ ಎಂದು ತಿಳಿದಿದ್ದರೂ ವಿಮಾನವನ್ನು ಹಾರಿಸಿದ್ದಾರೆಂಬ ಆರೋಪದ ಹಿನ್ನಲೆಯಲ್ಲಿ ಇಂಡಿಗೋ ವಿಮಾನದ 2 ಪೈಲಟ್ ಗಳು ಹಾಗೂ ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ನ 4 ಪೈಲಟ್ ಗಳನ್ನು ಅಮಾನತು ಮಾಡಲಾಗಿದ್ದು, ಡಿಜಿಸಿಎ ಕೈಗೊಂಡಿದ್ದ ತನಿಖಾ ವರದಿಯನ್ನು ಅನುಸರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ.

ನಾಗರಿಕ ವಾಯುಯಾನ ನಿಯಮಗಳ ಪ್ರಕಾರ ತುರ್ತು ಅವತರಣಕ್ಕೆ ಅನುಮತಿ ದೊರಕುವುದಕ್ಕೂ ಮುನ್ನ ಕನಿಷ್ಠ 30 ರಿಂದ 40 ನಿಮಿಷಗಳ ಕಾಲ ಆಗಸದಲ್ಲಿ ಪರಿಭ್ರಣ ನಡೆಸುವುದಕ್ಕೆ ಹಾಗೂ ಅತ್ಯಂತ ಸನಿಹದ ವಿಮಾನ ನಿಲ್ದಾಣದಲ್ಲಿ ಇಳಿಯುವ ವರೆಗಿನ ಅವಧಿಗೆ ಬೇಕಾಗುವಷ್ಟು ಇಂಧನವನ್ನು ವಿಮಾನ ಹೊಂದಿರುವಂತೆ ನೋಡಿಕೊಳ್ಳಬೇಕಾದದ್ದು ಪೈಲಟ್ ಗಳ ಹೊಣೆಗಾರಿಕೆಯಾಗಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಪೈಲಟ್ ಗಳು ತಮ್ಮ ಹೊಣೆಗಾರಿಕೆಯನ್ನು ಮರೆತಿರುವುದು ಕಂಡುಬಂದಿದ್ದು, ಹೀಗಾಗಿ ಆರು ಮಂದಿ ಪೈಲಟ್ ಗಳಿಗೆ ಪುನರ್ ತರಬೇತಿಯ ಅಗತ್ಯವಿದೆ ಎಂದು ಡಿಜಿಸಿಎ ತನ್ನ ತನಿಖಾ ವರದಿಯಲ್ಲಿ ಹೇಳಿದೆ. ವರದಿಯಂತೆ ತಪ್ಪಿತಸ್ಥರಾಗಿರುವ ಆರು ಮಂದಿ ಪೈಲಟ್ ಗಳನ್ನು ಕರ್ತವ್ಯದಿಂದ ಹಿಂಪಡೆಯಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಮಮತಾ ಬ್ಯಾನರ್ಜಿ ಹಾಗೂ ಇನ್ನಿತರೆ ನಾಯಕರು ಪ್ರಯಾಣಿಸುತ್ತಿದ್ದ ದೆಹಲಿ-ಕೋಲ್ಕತಾ ಇಂಡಿಗೋ ವಿಮಾನದಲ್ಲಿ ಇಂಧನ ಕಡಿಮೆ ಇರುವ ಸಮಯದಲ್ಲಿ ಪೈಲ್ ಮಾಡಿದ್ದ ತುರ್ತು ಅವತರಣ ಕೋರಿಕೆಗೆ ಆದ್ಯತೆ ನೀಡಿರುವುದರ ಹಿಂದೆ ಮಮತಾ ಅವರನ್ನು ಹತ್ಯೆ ಮಾಡುವ ಹುನ್ನಾರವಿತ್ತು ಎಂದು ಈ ಹಿಂದೆ ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಸಂಸದರು ಆರೋಪಿಸಿದ್ದರು. ಈ ಪ್ರಕರಣ ಸಂಬಂಧ ಸಂಸತ್ತಿನಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಈ ಎಲ್ಲಾ ಬೆಳವಣಿಗೆ ಹಿನ್ನಲೆಯಲ್ಲಿ ನಾಗರೀಕ ವಾಯುಯಾನದ ಸಚಿವರು ಘಟನೆಯನ್ನು ತನಿಖೆಗೆ ಆದೇಶಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com