ಕೋಲ್ಕತಾ: ಸೇನೆ ನಿಯೋಜನೆ ವಿವಾದ ಕುರಿತಂತೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಬರೆದಿರುವ ಪತ್ರಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ವಿಚಾರ ಸರ್ಕಾರದ ನೀತಿಗೆ ಸಂಬಂಧಿಸಿದ್ದೇ ವಿನಃ ಸೇನೆಗೆ ಸಂಬಂಧಿಸಿದ್ದಾಗಿರಲಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಪರಿಕ್ಕರ್ ಅವರ ಪತ್ರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪತ್ರದಲ್ಲಿ ಬಳಸಿರುವ ಭಾಷೆಯಿಂದ ಬೇಸರವಾಗಿದೆ. ನನ್ನ ಟೀಕೆ ಏನಿದ್ದರೂ ಸರ್ಕಾರದ ನೀತಿಯ ಕುರಿತಂತಾಗಿದ್ದೇ ವಿನಃ ಸೇನೆಯ ಕುರಿತಾಗಿ ಆಗಿರಲಿಲ್ಲ ಎಂದು ಹೇಳಿದ್ದಾರೆ.
ಪಶ್ಚಿಮ ಬಂಗಾಳದ ಟೋಲ್ ಪ್ಲಾಜಾಗಳಲ್ಲಿ ಸೇನೆಯನ್ನು ನಿಯೋಜಿಸಿದ್ದಕ್ಕೆ ತೀವ್ರವಾಗಿ ಕೆಂಡಾಮಂಡಲವಾಗಿದ್ದ ಮಮತಾ ಬ್ಯಾನರ್ಜಿಯವರು ತಮ್ಮ ಕಚೇರಿಯಲ್ಲಿ 36 ಗಂಟೆಗಳ ಕಾಲ ಕುಳಿತು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೆ, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿದ್ದರು.
ಈ ಹಿನ್ನಲೆಯಲ್ಲಿ ಮಮತಾ ಬ್ಯಾನರ್ಜಿಯವರಿಗೆ ಮನೋಹರ್ ಪರಿಕ್ಕರ್ ಅವರು ಪತ್ರವೊಂದನ್ನು ಬರೆದಿದ್ದರು. ಪತ್ರದಲ್ಲಿ ನಿಮ್ಮಂಥ ಉನ್ನತ ಸ್ಥಾನದಲ್ಲಿರುವ ಅನುಭವಿ ವ್ಯಕ್ತಿಯಿಂದ ಈ ಆರೋಪವನ್ನು ನಿರೀಕ್ಷಿಸಿರಲಿಲ್ಲ. ನಿಮ್ಮ ಆರೋಪಗಳಿಂದ ತುಂಬಾ ನೋವಾಗಿದೆ. ನಿಮ್ಮ ಆರೋಪದಿಂದ ದೇಶದ ಸೇನಾಪಡೆಯ ನೈತಿಕತೆಗೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಾರ್ವಜನಿಕ ಜೀವನದಲ್ಲಿ ನಿಮ್ಮಂಥ ಅನುಭವಿ ರಾಜಕಾರಣಿ, ಗೌರವಾನ್ವಿತ ಸ್ಥಾನದಲ್ಲಿರುವ ನಿಮ್ಮಂತವರಿಂದ ಈ ಮಾತುಗಳು ಬರುತ್ತವೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಹೇಳಿಕೊಂಡಿದ್ದರು.
Advertisement