ಬೆದರಿಕೆಯೊಡ್ಡುವ ಪ್ರಯತ್ನ ಬೇಡ, ಚರ್ಚೆ ನಡೆಸಲು ನಾವು ಸಿದ್ಧರಿದ್ದೇವೆ: ವಿಪಕ್ಷಗಳಿಗೆ ಕೇಂದ್ರ

ನೋಟು ನಿಷೇಧ ಕುರಿತಂತೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದ್ದು, ನಮಗೆ ಬೆದರಿಯೊಡ್ಡುವ ಪ್ರಯತ್ನಗಳನ್ನು ಕಾಂಗ್ರೆಸ್ ಪಕ್ಷ ಮಾಡಬಾರದು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು...
ಕೇಂದ್ರ ಸಚಿವ ವೆಂಕಯ್ಯ ನಾಯ್ಡು
ಕೇಂದ್ರ ಸಚಿವ ವೆಂಕಯ್ಯ ನಾಯ್ಡು

ನವದೆಹಲಿ: ನೋಟು ನಿಷೇಧ ಕುರಿತಂತೆ ಚರ್ಚೆ ನಡೆಸಲು ಕೇಂದ್ರ ಸರ್ಕಾರ ಸಿದ್ಧವಿದ್ದು, ನಮಗೆ ಬೆದರಿಯೊಡ್ಡುವ ಪ್ರಯತ್ನಗಳನ್ನು ಕಾಂಗ್ರೆಸ್ ಪಕ್ಷ ಮಾಡಬಾರದು ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅವರು ಶನಿವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ವಿರೋಧ ಪಕ್ಷಗಳ ಬೆದರಿಕೆಗೆ ನಾವು ಹೆದರುವುದಿಲ್ಲ. ಹೀಗಾಗಿ ಬೆದರಿಯೊಡ್ಡುವ ಪ್ರಯತ್ನಗಳು ಬೇಡ. ಅಧಿವೇಶನ ಆರಂಭವಾದಾಗಿನಿಂದಲೂ ನಾವು ಚರ್ಚೆಗೆ ಸಿದ್ಧರಿದ್ದೇವೆ. ಆದರೆ, ವಿರೋಧ ಪಕ್ಷಗಳು ಚರ್ಚೆ ಆರಂಭವಾದ ನಂತರ ಮಧ್ಯದಲ್ಲಿ ಓಡಿಹೋಗುತ್ತಾರೆ. ವಿರೋಧ ಪಕ್ಷದವರು ಏನನ್ನು ಮಾಡುತ್ತಾರೆಂಬುದನ್ನು ನಾವು ನೋಡಿದ್ದೇವೆ. ಅವರಿಗೆ ಅವರ ಪಕ್ಷವನ್ನು ಪುನಃಶ್ಚೇತನಗೊಳಿಸಲು ಸಾಧ್ಯವಾಗುವುದಿಲ್ಲ. ಅವರಿಗೆ ಆ ಶಕ್ತಿಯೂ ಇಲ್ಲ. ಹೀಗಾಗಿ ವಿರೋಧ ಪಕ್ಷಗಳ ನಾಯಕರು ಚರ್ಚೆಯಿಂದ ಓಡಿಹೋಗುತ್ತಿದ್ದಾರೆಂದು ಹೇಳಿದ್ದಾರೆ.

ಜನರನ್ನು ಬಿಡದೆ, ಜನರ ಪ್ರತಿನಿಧಿಯಾಗಿಯೂ ಕೆಲಸ ಮಾಡುತ್ತಿಲ್ಲ. ಎರಡೂ ಕಡೆಯಲ್ಲಿಯ ಹಾದಿಯನ್ನು ಹಾಳುಮಾಡುತ್ತಿದ್ದೀರಿ. ವಿರೋಧ ಪಕ್ಷಗಳು ಪ್ರಜಾಪ್ರಭುತ್ವ, ಸಂಸತ್ತನ್ನು ತಿರಸ್ಕರಿಸುತ್ತಿದ್ದು, ಹೇಳಿಕೆಗಳ ಮೂಲಕ ಬೆದರಿಕೆಯನ್ನು ಹಾಕುತ್ತಿದೆ. ಭ್ರಷ್ಟಾಚಾರ ಹಾಗೂ ಕಪ್ಪುಹಣ ಕುರಿತಂದೆ ಕಾಂಗ್ರೆಸ್ ಹಾಗೂ ಇನ್ನಿತರೆ ವಿರೋಧ ಪಕ್ಷಗಳು ಸ್ಪಷ್ಟನೆ ನೀಡಬೇಕಿದ್ದು, ಕಪ್ಪುಹಣ, ಭ್ರಷ್ಟಾಚಾರದ ಪರವಿದ್ದೀರೋ ಅಥವಾ ವಿರೋಧವಿದ್ದೀರೋ ಎಂಬುದನ್ನು ತಿಳಿಸಬೇಕಿದೆ ಎಂದು ತಿಳಿಸಿದ್ದಾರೆ.

ಸಂಸತ್ತಿನಲ್ಲಿ ಚರ್ಚಿಸಬೇಕಾದದ್ದು ಸಾಕಷ್ಟು ವಿಚಾರಗಳಿದ್ದು, ಚರ್ಚೆ ನಡೆಸುವ ಅಗತ್ಯವಿದೆ. ಉತ್ತಮ ವೇದಿಕೆಯಲ್ಲಿ ಚರ್ಚೆ ನಡೆಯಬೇಕಿದ್ದು, ಸಂಸತ್ತಿನಲ್ಲಿ ಚರ್ಚೆ ನಡೆಸಲು ಅವಕಾಶ ದೊರಕಿದೆ. ಶಾಂತಿಯುತವಾಗಿ ಉತ್ತಮತನದಿಂದ ಚರ್ಚೆ ನಡೆಸಬೇಕಿದೆ. ಇಷ್ಟೆಲ್ಲಾ ಬೆಳವಣಿಗೆಗಳ ನಡುವೆಯೂ ವಿಪಕ್ಷಗಳು ಪ್ರತಿಭಟನೆ ನಡೆಸಿದ್ದೇ ಆದರೆ, ಅವರು ಜನರ ಮುಂದೆ ಹೋಗಿ ಪ್ರತಿಭಟಿಸಲಿ ಎಂದು ಹೇಳಿದ್ದಾರೆ.

ಇದೇ ವೇಳೆ ನೋಟು ನಿಷೇಧ ಕುರಿತಂತೆ ನಾನು ಮಾತನಾಡಿದರೆ ಸಂಸತ್ತಿನಲ್ಲಿ ಭೂಕಂಪವಾಗುತ್ತದೆ ಎಂಬ ರಾಹುಲ್ ಗಾಂಧಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ಭೂಕಂಪ ಆಗುತ್ತದೆ ಎಂದು ರಾಹುಲ್ ಗಾಂಧಿಯವರು ಹೇಳಿದ್ದಾರೆ. ಈ ರೀತಿಯ ಹೇಳಿಕೆಯಿಂದ ಜನರಿಗೆ ಯಾವು ಸಂದೇಶವನ್ನು ಸಾರಲು ಹೊರಟಿದ್ದೀರಿ? ಕಾಂಗ್ರೆಸ್ ದಿನದಿಂದ ದಿನಕ್ಕೆ ಕುಗ್ಗುತ್ತಲಿದ್ದು, 440ರಿಂದ ಇದೀಗ 44ಕ್ಕೆ ಬಂದಿದ್ದಾರೆ. ದೇಶದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗಿರುವ ಜನಪ್ರಿಯತೆ ಅವರಿಗೆ ತಿಳಿದಿಲ್ಲ. ಮೋದಿಯವರ ಜನಪ್ರಿಯತೆಯನ್ನು ಅರಗಿಸಿಕೊಳ್ಳಲು ಕಾಂಗ್ರೆಸ್ ಗೆ ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com