ಭರತ್ ಪುರ: ನೋಟು ನಿಷೇಧದ ಬಳಿಕ ದೇಶದಲ್ಲಿ ಉಂಟಾಗಿರುವ ನಗದು ಬಿಕ್ಕಟ್ಟಿನಿಂದ ರೊಚ್ಚಿಗೆದ್ದ ಜನಪ್ರತಿನಿಧಿಯೊಬ್ಬ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಆರ್ ಬಿಐ ಅಧ್ಯಕ್ಷ ಊರ್ಜಿತ್ ಪಟೇಲ್ ಅವರ ವಿರುದ್ಧ ದೂರು ದಾಖಲು ಮಾಡಿದ್ದಾರೆ.
ರಾಜಸ್ತಾನದ ಭರತ್ ಪುರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸ್ಥಳೀಯ ಕಾಂಗ್ರೆಸ್ ಮುಖಂಡ ವಿಶ್ವೇಂದ್ರ ಸಿಂಗ್ ಅವರು ದೂರು ನೀಡಿದ್ದಾರೆ. ತಮ್ಮ ದೂರಿನಲ್ಲಿ ಆರ್ ಬಿಐಗೆ ನೋಟು ನಿಷೇಧದ ಕುರಿತು ತಿಳಿದಿದ್ದೂ ಜನರಿಗೆ ಅಗತ್ಯವಾದ ನೋಟುಗಳನ್ನು ಮುದ್ರಣ ಮಾಡಿಲ್ಲವೇಕೆ ಎಂದು ಪ್ರಶ್ನಿಸಿದ್ದಾರೆ. ಹೀಗಾಗಿ ಜನರ ನಂಬಿಕೆಗೆ ಆರ್ ಬಿಐ ಮೋಸ ಮಾಡಿದ್ದು, ಖಂಡಿತಾ ಆ ಸಂಸ್ಥೆಯನ್ನು ಶಿಕ್ಷಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಆರ್ ಬಿಐ ವಿರುದ್ಧ ಎಫ್ ಐಆರ್ ದಾಖಲಿಸಲು ಸ್ಛಳೀಯ ಪೊಲೀಸರು ಹಿಂದೇಟು ಹಾಕುತ್ತಿರುವುದರಿಂದ ತಾವು ಉನ್ನತ ಮಟ್ಟದ ನ್ಯಾಯಾಲಯಗಳಲ್ಲಿ ಪ್ರಶ್ನಿಸುವುದಾಗಿ ಹೇಳಿದ್ದಾರೆ.
ಮೂಲಗಳ ಪ್ರಕಾರ ವಿಶ್ವೇಂದ್ರ ಸಿಂಗ್ ಅವರು ತಮ್ಮ ಖಾತೆಯಿಂದ 10 ಸಾವಿರ ರು.ಹಣ ಪಡೆಯಲು ಬ್ಯಾಂಕ್ ಗೆ ತೆರಳಿದ್ದರು. ಆದರೆ ಆ ಸ್ಥಳೀಯ ಬ್ಯಾಂಕಿನಲ್ಲಿ ಕೇವಲ 3 ಲಕ್ಷ ರು. ಮಾತ್ರ ನಗದು ಇದ್ದು, ವಿಶ್ವೇಂದ್ರ ಸಿಂಗ್ ಅವರಿಗೆ ಕೇವಲ 2 ಸಾವಿರ ರು.ಮಾತ್ರ ನೀಡಲು ಸಾಧ್ಯ ಎಂದು ಹೇಳಿದೆ. ಇದರಿಂದ ವಿಶ್ವೇಂದ್ರ ಸಿಂಗ್ ಅವರು ಕುಪಿತರಾಗಿ ಬ್ಯಾಂಕ್ ಅಧಿಕಾರಿಗಳನ್ನೇ ತರಾಟೆಗೆ ತೆಗೆದುಕೊಂಡಿದ್ದಾರೆ. ಹಲವು ಗಂಟೆಗಳ ಕಾಲ ಸರತಿ ಸಾಲಲ್ಲಿ ನಿಂತಿದ್ದರೂ ತಮಗೆ ನಗದು ಸಿಗಲಿಲ್ಲ ಎಂಬ ಕೋಪ ಒಂದೆಡೆಯಾದರೆ ತಮ್ಮ ಹಣವನ್ನು ಪಡೆಯಲೂ ಸಾಧ್ಯವಾಗುತ್ತಿಲ್ಲ ಎಂಬ ಹತಾಶೆಯಿಂದ ವಿಶ್ವೇಂದ್ರ ಸಿಂಗ್ ಅಧಿಕಾರಿಗಳ ವಿರುದ್ಧ ಕೂಗಾಡಿದ್ದಾರೆ.
ಬಳಿಕ ಸ್ಥಳೀಯ ಪೊಲೀಸ್ ಠಾಣೆಗೆ ಆಗಮಿಸಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ಆರ್ ಬಿಐ ಊರ್ಜಿತ್ ಪಟೇಲ್ ಅವರ ವಿರುದ್ಧ ದೂರು ದಾಖಲಿಸಿದ್ದಾರೆ.
Advertisement