
ನವದೆಹಲಿ: ಕೇರಳದಲ್ಲಿ ಮೀನುಗಾರರನ್ನು ಗುಂಡಿಕ್ಕಿ ಕೊಂದು ಶಿಕ್ಷೆ ಭೀತಿ ಎದುರಿಸುತ್ತಿರುವ ಇಟಲಿಯ ನಾವಿಕರನ್ನು ಬಿಡುಗಡೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರ ಭ್ರಷ್ಟಾಚಾರದ ಕುರಿತು ಸಾಕ್ಷಿಗಳನ್ನು ಕೇಳಿದ್ದರು ಎಂಬ ವರದಿಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.
ಇಂತಹುದೊಂದು ಚರ್ಚೆ ಹುಟ್ಟುಹಾಕಿರುವುದು ಬ್ರಿಟೀಷ್ ಮೂಲದ ರಕ್ಷಣಾ ಸಾಮಗ್ರಿಗಳ ಏಜೆಂಟ್ ನ ಆರೋಪ. ಮೂಲಗಳ ಪ್ರಕಾರ ಬ್ರಿಟನ್ ಮೂಲದ ರಕ್ಷಣಾ ಸಾಮಗ್ರಿಗಳ ಏಜೆಂಟ್ ಕ್ರಿಶ್ಚಿಯನ್ ಮೈಕೆಲ್ ನ ಪ್ರಕಾರ, ಇಟಲಿ ನಾವಿಕರ ಪ್ರಕರಣ ಇತ್ಯರ್ಥಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹೊಸದೊಂದು ಪ್ರಸ್ತಾಪವನ್ನು ಮುಂದಿಟ್ಟಿತ್ತು. ಅದರ ಪ್ರಕಾರ ಇಟಲಿ ಸರ್ಕಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬದ ವಿರುದ್ಧ ಕೇಳಿಬರುತ್ತಿರುವ ಭ್ರಷ್ಟಾಚಾರ ಆರೋಪಗಳ ಕುರಿತು ಸಾಕ್ಷ್ಯಾಧಾರಗಳಿದ್ದರೆ ನಮಗೆ ಕಳುಹಿಸಿದರೆ, ಇಟಲಿ ನಾವಿಕರ ಪ್ರಕರಣವನ್ನು ನಾವು ಇತ್ಯರ್ಥ ಮಾಡುತ್ತೇವೆ ಎಂದು ಹೇಳಿತ್ತು ಎಂದು ಹೇಳಿದ್ದಾನೆ.
ದಿ ಟೆಲಿಗ್ರಾಫ್ ವರದಿ ಮಾಡಿರುವಂತೆ 54 ವರ್ಷದ ಏಜೆಂಟ್ ಕ್ರಿಶ್ಚಿಯನ್ ಮೈಕೆಲ್ ಹ್ಯಾಂಬರ್ಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಮತ್ತು ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ಮಧ್ಯಸ್ಥಿಕೆಯ ಶಾಶ್ವತ ಕೋರ್ಟ್ (Permanent Court of Arbitration-PCA)ಗೆ ಪತ್ರವೊಂದನ್ನು ಬರೆದಿದ್ದು, ಪತ್ರದಲ್ಲಿ ಈ ಬಗ್ಗೆ ಉಲ್ಲೇಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಭಾರತ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಮ್ಯಾಟೋ ರೆಂಜಿ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ್ದು, ಆಗ ಬಹುಕೋಟಿ ಹೆಲಿಕಾಪ್ಟರ್ ಹಗರಣದ ಕುರಿತು ಚರ್ಚಿಸಿದ್ದರು. ಈ ರಹಸ್ಯ ಸಭೆ ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ನಡೆದಿದ್ದು, ಆಗ ಇಬ್ಬರೂ ನಾಯಕರು ವಾಷಿಂಗ್ಟನ್ ನಲ್ಲಿ ಇದ್ದರು ಎಂದು ಏಜೆಂಟ್ ಹೇಳಿದ್ದಾನೆ ಎಂದು ಪತ್ರಿಕೆ ವರದಿ ಮಾಡಿದೆ.
ಅಲ್ಲದೆ ಈ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ನಾವಿಕರ ಪ್ರಕರಣದ ಇತ್ಯರ್ಥಕ್ಕೆ ಹೊಸದೊಂದು ಪ್ರಸ್ತಾಪವನ್ನು ಇಟಲಿ ಪ್ರಧಾನಿಗಳ ಮುಂದಿಟ್ಟಿದ್ದರು. ಅದರಂತೆ ಸೋನಿಯಾ ಗಾಂಧಿ ಮತ್ತು ಅವರ ಕುಟುಂಬದ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ಕುರಿತಂತೆ ಸಾಕ್ಷ್ಯಾಧಾರಗಳನ್ನು ಹಂಚಿಕೊಂಡರೆ, ನಾವಿಕರ ಪ್ರಕರಣವನ್ನು ಇತ್ಯರ್ಥಗೊಳಿಸುವುದಾಗಿ ಮೋದಿ ಹೇಳಿದ್ದರು. ಪ್ರಮುಖವಾಗಿ ಅಗಸ್ಟಾ ವೆಸ್ಚ್ ಲ್ಯಾಂಡ್ ಮತ್ತು ಫಿನ್ ಮೆಕಾನಿಕಾ ಸಂಸ್ಥೆಗಳೊಂದಿಗೆ ಮಾಡಿಕೊಂಡಿದ್ದ ಬಹುಕೋಟಿ ವಿವಿಐಪಿ ಹೆಲಿಕಾಪ್ಟರ್ ಹಗರಣ ಸಂಬಂಧ ಮೋದಿ ಸಾಕ್ಷಿ ಕೇಳಿದ್ದರು ಎಂದು ಏಜೆಂಟ್ ತನ್ನ ಬರೆದಿದ್ದ ಎಂದು ಪತ್ರಿಕೆ ವರದಿ ಮಾಡಿದೆ.
ಆದರೆ ಈ ವರದಿಗಳನ್ನು ಭಾರತೀಯ ವಿದೇಶಾಂಗ ಇಲಾಖೆ ಅಲ್ಲಗಳೆದಿದ್ದು, ಇದೊಂದು ಹಾಸ್ಯಾಸ್ಪದ ಆರೋಪ ಎಂದು ವರದಿಯನ್ನು ತಿರಸ್ಕರಿಸಿದೆ. ಇತ್ತ ಭಾರತ ವಿದೇಶಾಂಗ ಇಲಾಖೆಯ ಸ್ಪಷ್ಟನೆಯನ್ನು ಟೀಕಿಸಿರುವ ಬ್ರಿಟೀಷ್ ಏಜೆಂಟ್ ಕ್ರಿಶ್ಚಿಯನ್ ಮೈಕೆಲ್ ಭಾರತ ಸರ್ಕಾರ ನನ್ನ ಹೇಳಿಕೆಯನ್ನು ತಿರಸ್ಕರಿಸುತ್ತದೆ ಎಂದು ನನಗೆ ಮೊದಲೇ ತಿಳಿದಿತ್ತು. ಆದರೆ ನಾನು ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ. ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳಿಕೊಂಡಿದ್ದಾನೆ.
Advertisement