ನವದೆಹಲಿ: ಹರಿಯಾಣದಲ್ಲಿನ ವಿದೇಶಿಗರಿಗೆ ಗೋಮಾಂಸ ತಿನ್ನಲು ವಿಶೇಷ ಪರವಾನಗಿ ನೀಡಲು ಅಲ್ಲಿನ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಚಿಂತನೆ ನಡೆಸಿದ್ದಾರೆ.
ಈ ಹಿಂದೆ ಹರಿಯಾಣದಲ್ಲಿ ಗೋಮಾಂಸ ಸೇವನೆ ಹಾಗೂ ಮಾರಾಟವನ್ನು ನಿಷೇಧಿಸಿ ಕಾನೂನೊಂದನ್ನು ರಚಿಸಲಾಗಿತ್ತು. ಅದರಂತೆ ಗೋ ಹತ್ಯೆ, ಗೋಮಾಂಸ ಸೇವನೆ, ಮಾರಾಟ ಹಾಗೂ ಗೋವುಗಳಿಗೆ ನೋವುಂಟು ಮಾಡುವುದನ್ನು ಅಪರಾಧವೆಂದು ಹೇಳೆ ಕಠಿಣ ಕಾನೂನನ್ನು ರಚಿಸಲಾಗಿತ್ತು. ಈ ಕಾನೂನಿಗೆ ರಾಷ್ಟ್ರಪತಿಯವರೂ ಕೂಡ ಸಮ್ಮತಿ ಸೂಚಿಸಿದ್ದರು.
ಈ ಕಾನೂನು ಹರಿಯಾಣದಲ್ಲಿ ನೆಲೆಸಿರುವ, ಕೆಲಸ ಮಾಡುತ್ತಿರುವ ವಿದೇಶಿಗರಿಗೆ ಸಮಸ್ಯೆಯೊಂದನ್ನುಂಟು ಮಾಡಿತ್ತು. ಇದೀಗ ಸಮಸ್ಯೆಯನ್ನು ಪರಿಗಣಿಸಿರುವ ಅಲ್ಲಿನ ಸರ್ಕಾರ ಗೋಮಾಂಸ ತಿನ್ನುವ ವಿದೇಶಿಗರಿಗೆ ವಿಶೇಷ ಪರವಾನಗಿ ನೀಡಲು ಚಿಂತನೆ ನಡೆಸಿದೆ.
ಗೋಮಾಂಸ ಯಾರೂ ತಿನ್ನಲೇಬಾರದು ಎಂದು ಕಾನೂನನ್ನು ರಚನೆ ಮಾಡಿಲ್ಲ. ಹರಿಯಾಣಿಗರಿಗೆ ಗೋಮಾಂಸವನ್ನು ನಿಷೇಧಿಸಲಾಗಿದೆ. ಕಾನೂನು ರಚನೆಯಾಗಿರುವುದು ಹರಿಯಾಣದಲ್ಲಿರುವ ಜನತೆಯ ಭಾವನೆಗಳಿಗೆ ಧಕ್ಕೆಯಾಗಬಾರದೆಂಬ ಕಾರಣಕ್ಕೆ. ರಾಜ್ಯದಲ್ಲಿ ನೆಲೆಸಿರುವ ವಿದೇಶಿ ವಲಸಿಗರಿಗೆ ಗೋಮಾಂಸ ತಿನ್ನಲು ವಿಶೇಷ ಪರವಾನಗಿಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದು ಹೇಳಿದ್ದಾರೆ.
ಪ್ರತಿಯೊಬ್ಬರಿಗೂ ಅವರದ್ದೇ ಆದ ತಿನ್ನುವ ಹಾಗೂ ಕುಡಿಯುವ ಶೈಲಿಯೆಂಬುದಿರುತ್ತದೆ. ಅದರಲ್ಲೂ ವಿದೇಶದಿಂದ ವಲಸೆ ಬಂದಿರಿವವರಿಗೆ. ಆದಕ್ಕೆ ನಾವು ವಿರೋಧ ವ್ಯಕ್ತಪಡಿಸುವುದಿಲ್ಲ. ಒಬ್ಬರ ಆಹಾರ ಶೈಲಿಯ ಬಗ್ಗೆ ನಮ್ಮ ವಿರೋಧಿಸುವುದಿಲ್ಲ. ವಿದೇಶಿಗರಿಗೆ ಗೋಮಾಂಸ ತಿನ್ನುವ ಸೌಲಭ್ಯ ಬೇಕಾದಲ್ಲಿ ನಾವು ಆ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ. ಈ ಬಗ್ಗೆ ನಾವು ಚರ್ಚೆನಡೆಸಿದ್ದು, ವಿದೇಶಿಗರಿಗೆ ವಿಶೇಷ ಪರವಾನಗಿಯನ್ನು ನೀಡಲಿದ್ದೇವೆ. ಈ ಬಗ್ಗೆ ಯಾರೊಬ್ಬರೂ ಕಾನೂನನ್ನು ವಿರೋಧಿಸುವಂತಿಲ್ಲ ಎಂದು ಹೇಳಿದ್ದಾರೆ.
Advertisement