ಬೇಗುಸರಾಯ್: ಸಾರ್ವಜನಿಕೆ ರಸ್ತೆಗೆ ಅಡ್ಡಲಾಗಿ ನಿರ್ಮಾಣ ಮಾಡಿರುವ ಹನುಮಂತನ ದೇಗುಲವನ್ನು ತೆರವುಗೊಳಿಸಲು ಮುಂದಾಗಿರುವ ಇಲ್ಲಿನ ಜಿಲ್ಲಾಡಳಿತ ಮಂಡಳಿಯು, ಇದೀಗ ಹನುಮನಿಗೆ ನೋಟಿಸ್ ಕಳುಹಿಸಿದೆ.
ಬೇಗುಸರಾಯ್ ನಲ್ಲಿರುವ ಲೋಹಿಯಾ ನಗರದಲ್ಲಿ ದೇಗುಲವನ್ನು ನಿರ್ಮಾಣ ಮಾಡಲಾಗಿದೆ. ಈ ದೇಗುಲ ಸಾರ್ವಜನಿಕರ ರಸ್ತೆಗೆ ಅಡ್ಡಲಾಗಿದೆ ಎಂದು ಹೇಳಿರುವ ಜಿಲ್ಲಾಡಳಿತ ಮಂಡಳಿ ಇದೀಗ ಹನುಮನಿಗೆ ನೋಟಿಸ್ ಜಾರಿ ಮಾಡಿದ್ದು, ನೋಟಿಸ್ ನಲ್ಲಿ ದೇಗುಲ ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆ ಉಂಟು ಮಾಡುತ್ತಿದ್ದು, ದೇಗುಲವನ್ನು ಯಾಕೆ ಕೆಡವಿ ಹಾಕಬಾರದು ಎಂಬುದಕ್ಕೆ ಕಾರಣ ನೀಡುವಂತೆ ಹೇಳಲಾಗಿದೆ.
ಮಂದಿರ ತೆರವು ಕುರಿತಂತೆ ಮಾಹಿತಿ ತಿಳಿದಿರುವ ಅಲ್ಲಿನ ಸ್ಥಳೀಯರು ಹಾಗೂ ಭಜರಂಗ ದಳದ ಕಾರ್ಯಕರ್ತರು ಈಗಾಗಲೇ ಪ್ರತಿಭಟನೆ ನಡೆಸುತ್ತಿದ್ದು, ದೇಗುಲವನ್ನು ಕೆಡವಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದೆ. ಅಲ್ಲದೆ, ದೇಗುಲ ಕೆಡವಲು ಹನುಮನಿಗೆ ನೋಟಿಸ್ ಜಾರಿ ಮಾಡಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದೆ.
ಪ್ರತಿಭಟನೆಯಿಂದಾಗಿ ಸ್ಥಳಕ್ಕೆ ಭೇಟಿ ನೀಡಿರುವ ಅಲ್ಲಿನ ಅಧಿಕಾರಿಗಳು, ನೋಟಿಸ್ ಕುರಿತಂತೆ ಆಂತರಿಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಪ್ರಸ್ತುತ ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿದುಬಂದಿದೆ.
Advertisement