ಬರಾಸತ್: ನವಜಾತ ಶಿಶುಗಳಿಗಾಗಿ ಸರ್ಕಾರ ನಿಯೋಜಿಸಿರುವ ಉಚಿತ ಸೇವಾ ಆ್ಯಂಬುಲೆನ್ಸ್ ಚಾಲಕನೊಬ್ಬ ಹಣಕ್ಕಾಗಿ ಪಟ್ಟು ಹಿಡಿದು ಮಗುವಿನ ಪ್ರಾಣವೇ ಹೋಗುವಂತೆ ಮಾಡಿರುವ ಘಟನೆಯೊಂದು ಪಶ್ಚಿಮ ಬಂಗಾಳದ ಉತ್ತರ 24 ಜಿಲ್ಲೆಯ ಅಮದಂಗದ ಜತ್ರಪೋಟ ಪ್ರದೇಶದಲ್ಲಿ ಬುಧವಾರ ನಡೆದಿದೆ.
ಎಂಟು ತಿಂಗಳ ಮಗು ಸೋಹಾನಿ ಸುಲ್ತಾನ ಸಾವನ್ನಪ್ಪಿರುವ ಮಗುವಾಗಿದ್ದು, ಕಳೆದ ಹಲವು ದಿನಗಳಿಂದಲೂ ಮಗು ಉಸಿರಾಟ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ಮಗುವನ್ನು ಬರಾಸತ್ ನಲ್ಲಿರುವ ಸರ್ಕಾರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ನಿನ್ನೆ ಮಗುವನ್ನು ತಪಾಸಣೆ ಮಾಡಿದ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿಸ್ತೆಗೆ ಕೊಲ್ತತಾ ಆಸ್ಪತ್ರೆಗೆ ದಾಖಲು ಮಾಡುವಂತೆ ಸಲಹೆ ನೀಡಿದ್ದಾರೆ.
ಈ ವೇಳೆ ಆಸ್ಪತ್ರೆಯ ಸಿಬ್ಬಂದಿಗಳು ರಾಷ್ಟ್ರೀಯ ಆರೋಗ್ಯ ಕಾರ್ಯದ ಅಡಿಯಲ್ಲಿ ಸರ್ಕಾರ ಜನನಿ ಶಿಶು ಸುರಕ್ಷಾ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಯೋಜನೆಯಲ್ಲಿ ನವಜಾತ ಶಿಶುಗಳಿಗಾಗಿ ಸರ್ಕಾರ ಉಚಿತ ಆ್ಂಯಬುಲೆನ್ಸ್ ಸೇವೆಯನ್ನು ನೀಡುತ್ತದೆ ಎಂದು ಹೇಳಿದ್ದಾರೆ. ಇದರಂತೆ ಸಿಬ್ಬಂದಿಗಳ ಮಾತು ಕೇಳಿದ ಮಗುವಿನ ಪೋಷಕರು ಆ್ಂಯಬುಲೆನ್ಸ್ ಅರ್ಜಿಯನ್ನು ಸಲ್ಲಿಸಿದ್ದಾರೆ.
ನಂತರ ಆ್ಂಯಬುಲೆನ್ಸ್ ಇದ್ದ ನಿಲ್ದಾಣಕ್ಕೆ ಪೋಷಕರು ಮಗುವನ್ನು ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಆ್ಂಯಬುಲೆನ್ಸ್ ನ ಚಾಲಕ ಹಣ ಪಾವತಿಸದೆ ಮಗುವನ್ನು ಕರೆದೊಯ್ಯಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ಮಗುವಿಗೆ ನೀಡಲಾಗುವ ಆಮ್ಲಜನಕದ ಸಿಲಿಂಡರ್ ಗೆ 100 ಹಾಗೂ 750 ವಾಹನ ಚಾಲನೆ ಮಾಡಲು ಹಾಗೂ 150 ರುಪಾಯಿ ಹಣವನ್ನು ಟಿಪ್ಸ್ ಹಣವಾಗಿ ಒಟ್ಟು ರು.1000 ಹಣವನ್ನು ಪಾವತಿ ಮಾಡಿದರೆ ಮಾತ್ರ ಮಗುವನ್ನು ಕರೆದೊಯ್ಯುತ್ತೇನೆಂದು ಪಟ್ಟು ಹಿಡಿದಿದ್ದಾನೆ. ಈ ವೇಳೆ ಪೋಷಕರು ಹಾಗೂ ಚಾಲಕನ ನಡುವೆ 1 ಗಂಟೆಗಳ ಕಾಲ ಮಾತಿನ ಚಕಮಕಿ ನಡೆದಿದೆ.
ಚಾಲಕನ ಸಮಯ ವ್ಯರ್ಥದಿಂದಾಗಿ ಮಗುವಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ಮಗು ಮೃತಪಟ್ಟಿದೆ ಎಂದು ಹೇಳಲಾಗುತ್ತಿದೆ. ಇದೀಗ ಮಗುವಿನ ಸಾವಿಗೆ ಚಾಲಕನೇ ಕಾರಣ ಎಂದು ಪೋಷಕರು ಆರೋಪಿಸುತ್ತಿದ್ದು, ಚಾಲಕನ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.
Advertisement