ನವದೆಹಲಿ: ಗಂಗಾನದಿ ಪಾತ್ರದ ಕೈಗಾರಿಕೆಗಳಿಗೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿ ಮತ್ತೆ ಛಾಟಿ ಬೀಸಿದ್ದು, ನದಿಗೆ ಹೆಚ್ಚು ಮಾಲಿನ್ಯ ಬಿಡುಗಡೆ ಮಾಡುತ್ತಿರುವ ಕಾರಣಕ್ಕಾಗಿ ನಿಮ್ಮ ಕಾರ್ಖಾನೆಯನ್ನೇಕೆ ಮುಚ್ಚಿಸಬಾರದು ಎಂದು ಕೇಳಿ ಷೋಕಾಸ್ ನೋಟಿಸ್ ಜಾರಿ ಮಾಡಿದೆ.
ಗಂಗಾನದಿ ಹರಿಯುವ ಹರಿದ್ವಾರದಿಂದ ಕಾನ್ಪುರವರೆಗಿನ ನದಿ ಪಾತ್ರದ ಸುಮಾರು 40ಕ್ಕೂ ಹೆಚ್ಚು ಕಾರ್ಖಾನೆಗಳಿಗೆ ನ್ಯಾಯಮಂಡಳಿ ಬುಧವಾರ ಷೋಕಾಸ್ ನೋಟಿಸ್ ಜಾರಿ ಮಾಡಿದ್ದು, ಈ ಕಾರ್ಖಾನೆಗಳ ಪೈಕಿ ಡಿಸ್ಟಿಲರಿ, ಸಕ್ಕರೆ ಕಾರ್ಖಾನೆ, ಪೇಪರ್ ಮಿಲ್ ಸೇರಿದಂತೆ ಹಲವು ಪ್ರಮುಖ ಕಾರ್ಖಾನೆಗಳು ಸೇರಿವೆ ಎಂದು ತಿಳಿದುಬಂದಿದೆ. ಇನ್ನು ಪ್ರಸ್ತುತ ಷೋಕಾಸ್ ನೋಟಿಸ್ ಪಡೆದಿರುವ 40 ಕಾರ್ಖಾನೆಗಳ ಪೈಕಿ 25 ಕಾರ್ಖಾನೆಗಳು ಬಿಜ್ನೋರ್ ನಲ್ಲಿದ್ದು, ಉಳಿದ 15 ಕಾರ್ಖಾನೆಗಳು ಅಮ್ರೋಹಾ ಜಿಲ್ಲೆಯಲ್ಲಿವೆ ಎಂದು ತಿಳಿದುಬಂದಿದೆ.
ಸುಪ್ರೀಂ ಕೋರ್ಟ್ ನಿರ್ದೇಶನ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಎಚ್ಚರಿಕೆಯ ನಡುವೆಯೂ ಗಂಗಾನದಿ ಪಾತ್ರದ ಕಾರ್ಖಾನೆಗಳು ಬಿಡುಗಡೆ ಮಾಡುತ್ತಿರುವ ಮಾಲಿನ್ಯ ಪ್ರಮಾಣ ಕಡಿಮೆಯಾಗಿಲ್ಲ ಎಂದು ಎನ್ ಜಿಟಿ ಕಿಡಿಕಾರಿದೆ. ಇದಕ್ಕೂ ಮೊದಲು ಗಂಗಾನದಿಯಲ್ಲಿ ಮಾಲಿನ್ಯ ಉಂಟು ಮಾಡುತ್ತಿರುವ ಗಂಗಾ ನದಿ ಪಾತ್ರದ ಕಾರ್ಖಾನೆಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಸಂಬಂಧ ಸಾರ್ವಜನಿಕರಿಗೆ ಮಾಹಿತಿ ನೀಡುವಂತೆ ಹಸಿರು ನ್ಯಾಯಮಂಡಳಿ ಉತ್ತರ ಪ್ರದೇಶ ಸರ್ಕಾರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ನಿರ್ದೇಶನ ನೀಡಿತ್ತು.
ನೇರವಾಗಿ ಅಥವಾ ಪರೋಕ್ಷವಾಗಿ ಗಂಗಾನದಿಯನ್ನು ಸೇರುತ್ತಿರುವ ಕೈಗಾರಿಕಾ ಮತ್ತು ವಸತಿ ಒಳಚರಂಡಿ ನೀರಿಗೆ ಸಂಬಂಧಿಸಿದ ಎಲ್ಲಾ ಅಂಶಗಳ ಬಗ್ಗೆ ಸ್ಪಷ್ಟ ನಿಲುವು ತಿಳಿಸುವಂತೆ ಈ ಮುನ್ನ ಪೀಠವು ಪರಿಸರ ಮತ್ತ ಅರಣ್ಯ ಮತ್ತು ಜಲ ಸಂಪನ್ಮೂಲ ಸಚಿವಾಲಯಗಳಿಗೆ ಸೂಚಿಸಿತ್ತು. ಈ ಸಂಬಂಧ ಮಾಹಿತಿ ನೀಡಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಅಧಿಕಾರಿ ಎಕೆ ತಿವಾರಿ ಅವರು, ಈಗಾಗಲೇ ನದಿ ಪಾತ್ರದ 40ಕ್ಕೂ ಹೆಚ್ಚು ಕಾರ್ಖಾನೆಗಳಿಗೆ ಎನ್ ಜಿಟಿ ನೋಟಿಸ್ ನೀಡಿದೆ. ಬಿಜ್ನೋರ್, ಅಮ್ರೋಹಾ ಮತ್ತು ದೆಹಲಿಯಲ್ಲಿರುವ ಕಾರ್ಖಾನೆಳಿಗೆ ಫೆಬ್ರವರಿ 17ರಂದು ನೋಟಿಸ್ ನೀಡಲಾಗಿತ್ತು. ಮಾಲಿನ್ಯ ನಿಯಂತ್ರಣ ಸಂಬಂಧ ಎನ್ ಜಿಟಿ ಈಗಾಗಲೇ ಕ್ರಮಗಳನ್ನು ಕೈಗೊಂಡಿದ್ದು, ತನ್ನ ನೀತಿಗಳನ್ನು ಮತ್ತು ಕಾನೂನುಗಳನ್ನು ಮತ್ತಷ್ಟು ಕಠಿಣಗೊಳಿಸಿದೆ ಎಂದು ಮಾಹಿತಿ ಮಾಡಿದರು.
Advertisement