ಆನೆ ದಾಳಿಗೆ ಐದು ವರ್ಷದಲ್ಲಿ 176ಕ್ಕೂ ಹೆಚ್ಚು ಸಾವು

ಬೆಂಗಳೂರಿನಲ್ಲಿ ಚಿರತೆ ದಾಳಿ ಭಾರಿ ಸದ್ದು ಮಾಡುತ್ತಿದ್ದರೆ ಕೇರಳದಲ್ಲಿ ಮಾತ್ರ ಆನೆ ದಾಳಿಗೆ ಬಲಿಯಾದವರ ಸಂಖ್ಯೆ ದಿನೇ ದಿನೇ ಏರುತ್ತಿದೆ...
ಆನೆ ದಾಳಿ (ಸಂಗ್ರಹ ಚಿತ್ರ)
ಆನೆ ದಾಳಿ (ಸಂಗ್ರಹ ಚಿತ್ರ)

ತಿರುವನಂತಪುರ: ಬೆಂಗಳೂರಿನಲ್ಲಿ ಚಿರತೆ ದಾಳಿ ಭಾರಿ ಸದ್ದು ಮಾಡುತ್ತಿದ್ದರೆ ಕೇರಳದಲ್ಲಿ ಮಾತ್ರ ಆನೆ ದಾಳಿಗೆ ಬಲಿಯಾದವರ ಸಂಖ್ಯೆ ದಿನೇ ದಿನೇ ಏರುತ್ತಿದೆ.

ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್ ನೀಡಿರುವ ಮಾಹಿತಿಯಂತೆ ಇತರೆ ಕಾಡು ಪ್ರಾಣಿಗಳ ದಾಳಿಗಿಂತ ಆನೆ ದಾಳಿಗೆ ಬಲಿಯಾದವರ ಸಂಖ್ಯೆಯೇ ಹೆಚ್ಚು ಎಂದು ತಿಳಿದುಬಂದಿದೆ. ಕೇವಲ ಕಳೆದ ಐದು ವರ್ಷದ ಅವಧಿಯಲ್ಲಿ ಆನೆ ದಾಳಿಗೆ ತುತ್ತಾಗಿ ಸುಮಾರು 176 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಮೃತರಲ್ಲಿ 10 ಮಾವುತರು, 10 ಮಹಿಳೆಯರು, ಓರ್ವ ವಿದ್ಯಾರ್ಥಿನಿ, ಓರ್ವ ಪಶು ವೈದ್ಯ, ಓರ್ವ ಆನೆ ಮಾಲೀಕ ಮತ್ತು ಓರ್ವ ತರಕಾರಿ ಮಾರಾಟಗಾರ ಕೂಡ ಸೇರಿದ್ದಾನೆ. ಬಹುತೇಕ ದುರಂತಗಳು ಕೇರಳದ ಸಾಂಪ್ರದಾಯಿಕ ದೇವಾಲಯಗಳ ಉತ್ಸವಗಳಲ್ಲಿ ಉಂಟಾಗಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದೇ ದುರಂತಕ್ಕೆ ಕಾರಣ ಎಂದು ವರದಿಯಲ್ಲಿ ಹೇಳಲಾಗಿದೆ.

ಇನ್ನು ಸುಪ್ರೀಂಕೋರ್ಟ್ ನಿರ್ದೇಶನದಂತೆ ಆನೆಗಳನ್ನು ಬೆಳಗ್ಗೆ 8ರಿಂದ 11 ಗಂಟೆಯವರೆಗೆ ಮತ್ತು ಸಂಜೆ 5ರಿಂದ ರಾತ್ರಿ 8 ಗಂಟೆಯ ಒಳಗೆ ಮಾತ್ರ ಮೆರಣಿಗೆಗೆ ಕರೆದೊಯ್ಯಬೇಕು. ಅಲ್ಲದೆ ಮೆರವಣಿಗೆ ಕರೆದೊಯ್ಯುವ ಮುನ್ನ ಜಿಲ್ಲಾಡಳಿತದ ಅನುಮತಿ ಪಡೆಯಬೇಕು ಎಂಬ ಸೂಚನೆ ಇದೆ. ಆದರೆ ಬಹುತೇಕ ದೇವಾಲಯಗಳು ಮತ್ತು ಆನೆ ಮಾಲೀಕರು ನ್ಯಾಯಾಲಯದ ನಿರ್ದೇಶನವನ್ನು ಪಾಲನೆ ಮಾಡದೇ, ಜಿಲ್ಲಾಡಳಿತದಿಂದ ಯಾವುದೇ ರೀತಿಯ ಲಿಖಿತ ಅನುಮತಿ ಪಡೆಯದೇ ಆನೆಗಳನ್ನು ಬಳಕೆ ಮಾಡುತ್ತಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇನ್ನು ದೇವಾಲಯದ ಉತ್ಸವಗಳಲ್ಲಿ ರಾತ್ರಿಯಿಡೀ ಮೆರವಣಿಗೆ ಮಾಡುವುದರಿಂದ ಮತ್ತು ಮೆರವಣಿಗೆ ವೇಳೆ ಉಂಟಾಗುವ ಶಬ್ದ ಮಾಲೀನ್ಯದಿಂದ ಆನೆಗಳು ಕೆರಳುತ್ತವೆ. ಇದರಿಂದ ದುರಂತಗಳು ಸಂಭವಿಸುತ್ತವೆ ಎಂದು ಹೆರಿಟೇಜ್ ಅನಿಮಲ್ ಟಾಸ್ಕ್ ಫೋರ್ಸ್ ನ ಕಾರ್ಯದರ್ಶಿ ವಿಕೆ ವೆಂಕಟಾಚಲಂ ಅವರು ಹೇಳಿದ್ದಾರೆ.



ಕೇರಳದ ಐತಿಹಾಸಿಕ ದೇವಾಲಯ ಗುರುವಾಯೂರ್ ದೇವಾಲಯದಲ್ಲಿ ಅತಿ ಹೆಚ್ಚು ಅಂದರೆ 56 ಆನೆಗಳಿದ್ದು, ದೇವಾಲಯದ ಆಡಳಿತ ಸುಪ್ರೀಂಕೋರ್ಟ್ ನ ಸೂಚನೆಯನ್ನು ತಪ್ಪದೇ ಪಾಲಿಸುತ್ತಿದೆ. ಇದರಿಂದ ದೇವಾಲಯದಲ್ಲಿ ಆನೆ ದುರಂತಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದೇ ರೀತಿ ದೇವಸ್ವಂ ಬೋರ್ಡ್ ಅಡಿಯಲ್ಲಿ ಬರುವ ಎಲ್ಲ ದೇವಾಲಯಗಳೂ ನಿಯಮವನ್ನು ಪಾಲಿಸಿದರೆ ಖಂಡಿತಾ ಆನೆ ದುರಂತಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ವೆಂಕಟಾಚಲಂ ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com