ಬೆಂಗಳೂರು: ರಾಜ್ಯದ ಎಲ್ಲಾ ನಗರ ಪ್ರದೇಶಗಳಲ್ಲಿ ಲೋಡ್ ಶೆಡ್ಡಿಂಗ್ ರದ್ದು ಮಾಡಲು ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಜತೆಗೆ ರೈತರ ಪಂಪ್ಸೆಟ್ಗಳಿಗೆ ನಿತ್ಯ 6 ರಿಂದ 7 ಗಂಟೆಗಳ ತ್ರಿಫೇಸ್ ವಿದ್ಯುತ್ ಪೂರೈಸಲು ತೀರ್ಮಾನಿಸಿದೆ. ರಾಜ್ಯದಲ್ಲಿ ನಿತ್ಯ 9800 ಮೆಗಾವ್ಯಾಟ್ ವಿದ್ಯುತ್ಗೆ ಬೇಡಿಕೆ ಇದ್ದು, ಸದ್ಯ 8400 ಮೆ.ವ್ಯಾ ಲಭ್ಯವಿದೆ. 1400 ಮೆ.ವ್ಯಾ ಕೊರತೆಯಿರುವುದರಿಂದ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿಯಾಗಿತ್ತು.
ಆದರೆ ಶುಕ್ರವಾರದಿಂದ (ಜನವರಿ 1) ದಾಮೋದರ ಕಣಿವೆಯಿಂದ ಸದ್ಯಕ್ಕೆ 168 ಮೆ.ವ್ಯಾ. ಹಾಗೂ ಏಪ್ರಿಲ್ನಿಂದ 300 ಮೆ.ವ್ಯಾ ಪೂರೈಕೆಯಾಗಲಿದೆ. ತಮಿಳುನಾಡಿನ ಕೂಡನ್ಕುಳಂನಿಂದ ಜ.15ರಿಂದ 221 ಮೆ.ವ್ಯಾ ಪೂರೈಕೆಯಾಗಲಿದೆ. ಜನವರಿ ಅಂತ್ಯಕ್ಕೆ ಬಳ್ಳಾರಿ ಥರ್ಮಲ್ ಘಟಕ3, ಯರಮರಸ್ ಘಟಕ1ರಿಂದ ತಲಾ 700 ಮೆ.ವ್ಯಾ ವಿದ್ಯುತ್ ಗ್ರಿಡ್ಗೆ ಸೇರ್ಪಡೆಗೊಳ್ಳಲಿದೆ ಎಂದು ಇಂಧನ ಸಚಿವ ಡಿ.ಕೆ ಶಿವಕುಮಾರ್ ಬೆಂಗಳೂರಿನಲ್ಲಿ ಹೇಳಿದರು.
'ರಾಜ್ಯದಲ್ಲಿ ಮುಂಗಾರು ಕೈಕೊಟ್ಟಿದ್ದರಿಂದ ಜಲಾಶಯಗಳು ಶೇ.50ರಷ್ಟು ಮಾತ್ರ ಭರ್ತಿಯಾಗಿದ್ದವು. ಬೇಸಿಗೆಯಲ್ಲಿ ವಿದ್ಯುತ್ ಹೆಚ್ಚು ಅವಶ್ಯವಿರುವ ಕಾರಣದಿಂದ ಆಗ ವಿದ್ಯುತ್ ಉತ್ಪಾದಿಸದೆ ನೀರನ್ನು ಉಳಿಸಿ ಕೊಳ್ಳಲಾಗಿತ್ತು. ಶುಕ್ರವಾರದಿಂದ (ಜ.1) ಪ್ರತಿ ದಿನ 1 ಸಾವಿರ ಮೆ.ವ್ಯಾ ಜಲವಿದ್ಯುತ್ ಹೆಚ್ಚುವರಿಯಾಗಿ ಉತ್ಪಾದನೆ ಮಾಡಲಾಗುತ್ತದೆ. ಹೀಗಾಗಿ ಲೋಡ್ ಶೆಡ್ಡಿಂಗ್ ರದ್ದು ಮಾಡಲಾಗಿದ್ದು, ರೈತರ ಪಂಪ್ಸೆಟ್ಗಳಿಗೆ 6ರಿಂದ 7 ಗಂಟೆಗಳ ವಿದ್ಯುತ್ ಪೂರೈಸಲು ನಿರ್ಧರಿಸಿದ್ದೇವೆ,'' ಎಂದು ವಿವರಿಸಿದರು. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಎಲ್ಇಡಿ ಬಲ್ಬ್ ಯೋಜನೆ ಯಶಸ್ವಿಯಾಗಿದ್ದು, ಮೈಸೂರಿನ 1.5ಲಕ್ಷ ಬಲ್ಬ್ಗಳನ್ನು ಗ್ರಾಹಕರು ಖರೀದಿಸಿದ್ದಾರೆ.
Advertisement