ನವದೆಹಲಿ: ಪಠಾಣ್ಕೋಟ್ ವಾಯುನೆಲೆಯಲ್ಲಿ ನಡೆದ ಉಗ್ರ ದಾಳಿಗೂ ಗುರುದಾಸ್ಪುರ ಎಸ್ಪಿ ಹೇಳಿರುವ ಅಪಹರಣ ಕತೆಗೂ ನಂಟಿದೆ ಎಂಬ ರೀತಿಯಲ್ಲಿಯೇ ಇಲ್ಲಿಯವರೆಗೆ ವರದಿಗಳು ಬಂದಿದ್ದವು. ಆದರೆ ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್ಗೂ ಈ ಉಗ್ರದಾಳಿ ನಡುವೆ ಯಾವುದೇ ಸಂಬಂಧವಿಲ್ಲ ಎಂದು ರಾಷ್ಟ್ರೀಯ ತನಿಖಾ ದಳ ಹೇಳಿದೆ.
ಆದಾಗ್ಯೂ, ರಾಷ್ಟ್ರೀಯ ತನಿಖಾ ದಳ ಸಲ್ವಿಂದರ್ ಸಿಂಗ್ ಅವರಿಗೆ ಕ್ಲೀನ್ಚಿಟ್ ಏನೂ ನೀಡಿಲ್ಲ ಎಂದು ಹೇಳಲಾಗುತ್ತಿದೆ. ಪಠಾಣ್ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ಮಾಡುವ ಮುನ್ನ ತನ್ನನ್ನು ಅಪಹರಣಕ್ಕೆ ಯತ್ನಿಸಲಾಯಿತು ಎಂದು ಗುರುದಾಸ್ಪುರ್ ಎಸ್ಪಿ ಸಲ್ವಿಂದರ್ ಸಿಂಗ್ ದೂರಿದ್ದರು.
ಆದರೆ ಎಸ್ಪಿ ಆ ಘಟನೆಯನ್ನು ವಿವರಿಸಿದ ರೀತಿ ಹಾಗೂ ಆ ಹೊತ್ತಲ್ಲಿ ಅವರೊಂದಿಗೆ ಇದ್ದ ಸ್ನೇಹಿತರು ನೀಡಿರುವ ಹೇಳಿಕೆಗಳಲ್ಲಿ ವೈರುಧ್ಯ ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಗುರುದಾಸ್ಪುರ ಎಸ್ಪಿಯನ್ನು ರಾಷ್ಟ್ರೀಯ ತನಿಖಾ ದಳ ವಿಚಾರಣೆಗೊಳಪಡಿಸಿತ್ತು.