ನವದೆಹಲಿ: ಪಠಾಣ್ ಕೋಟ್ ದಾಳಿ ಹಿನ್ನೆಲೆಯಲ್ಲಿ ರಾಜಧಾನಿಯ ಬಾರಾಖಾಂಬಾ ರಸ್ತೆಯ ಪಾಕಿಸ್ತಾನ್ ಇಂಟರ್ನ್ಯಾಷನಲ್ ಏರ್ಲೈನ್ಸ್ ಕಚೇರಿ ಮೇಲೆ ಬಲಬಂಥೀಯ ಸಂಘಟನೆ ಹಿಂದೂ ಸೇನೆಗೆ ಸೇರಿದ ಕೆಲವರು ಗುರುವಾರ ದಾಳಿ ನಡೆಸಿದ್ದಾರೆ.
ದಾಳಿ ಘಟನೆಯನ್ನು ದೃಢಪಡಿಸಿರುವ ಡಿಸಿಪಿ ಜತಿನ್ ನರ್ವಾಲ್, ಪಿಐಎ ಕಚೇರಿ ಮೇಲೆ ದಾಳಿ ನಡೆದಿದ್ದು, ಕಚೇರಿಯ ಕಂಪ್ಯೂಟರ್ ಮತ್ತಿತರ ಸಾಮಗ್ರಿಗಳನ್ನು ಧ್ವಂಸಗೊಳಿಸಿರುವ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ದಾಳಿಯ ಹಿಂದೆ ಹಿಂದೂ ಸೇನೆಯ ಮುಖ್ಯಸ್ಥ ವಿಷ್ಣು ಗುಪ್ತ ಮತ್ತು ಆತನ ಸಹಚರರು ಇರುವುದು ಗೊತ್ತಾಗಿದೆ ಎಂದಿದ್ದಾರೆ.
ಭಾರತದಿಂದ ಬೆದರಿಕೆ ತಂತ್ರ: ಪಾಕ್ ಮಾಜಿ ಅಧ್ಯಕ್ಷ ಜ.ಮುಷರಫ್ ಭಾರತ ಪಾಕ್ಗೆ ಒತ್ತಡ ಹೇರುತ್ತಿದೆ ಎಂದು ಆರೋಪಿಸಿದ್ದಾರೆ. ``ಭಾರತ ಅಗತ್ಯಕ್ಕಿಂತ ಹೆಚ್ಚಿನ ಒತ್ತಡ ಹೇರುವ, ಬೆದರಿಕೆ ಒಡ್ಡುವ ತಂತ್ರ ಪ್ರಯೋಗಿಸುತ್ತಿದೆ. ಇದು ಹೀಗೆ ಮುಂದುವರಿದರೆ ಪಾಕಿಸ್ತಾನ ಮರೆಯದ ತಿರುಗೇಟು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement