ಉದ್ಯಮಿ ಪುತ್ರನ ಮದುವೆಗೆ ಬಂದು ಹರಿಸಿದ 18 ಸಾವಿರ ವಿಧವೆಯರು..!

ಗುಜರಾತ್ ಮೂಲದ ಖ್ಯಾತ ಉದ್ಯಮಿಯೊಬ್ಬರ ಮದುವೆಯಲ್ಲಿ ಸುಮಾರು 18 ಸಾವಿರ ವಿಧವೆಯರು ಪಾಲ್ಗೊಂಡು, ನವ ವಧು-ವರರನ್ನು ಹರಿಸಿದ್ದಾರೆ...
ವಿಧವೆಯರು (ಸಂಗ್ರಹ ಚಿತ್ರ)
ವಿಧವೆಯರು (ಸಂಗ್ರಹ ಚಿತ್ರ)

ನವದೆಹಲಿ: ಗುಜರಾತ್ ಮೂಲದ ಖ್ಯಾತ ಉದ್ಯಮಿಯೊಬ್ಬರ ಮದುವೆಯಲ್ಲಿ ಸುಮಾರು 18 ಸಾವಿರ ವಿಧವೆಯರು ಪಾಲ್ಗೊಂಡು, ನವ ವಧು-ವರರನ್ನು ಹರಿಸಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ ವಿಧವೆಯರನ್ನು ಕೊಂಚ ಕೀಳಾಗಿ ಕಾಣಲಾಗುತ್ತದೆ. ಯಾವುದೇ ಶುಭ ಸಮಾರಂಭಗಳಿಗೆ ಅವರನ್ನು ಆಹ್ವಾನಿಸುವುದಾಗಲಿ ಅಥವಾ ಅವರೇ ತಮ್ಮನ್ನು ತಾವು  ಇಂತಹ ಸಮಾರಂಭಗಳಿಂದ ದೂರವಿರುತ್ತಾರೆ. ಆದರೆ ಗುಜರಾತ್ ನ ಖ್ಯಾತ ಉದ್ಯಮಿಯೊಬ್ಬರು ತಮ್ಮ ಪುತ್ರನ ವಿವಾಹ ಸಮಾರಂಭಕ್ಕೆ ಬರೊಬ್ಬರಿ 18 ಸಾವಿರ ವಿಧವೆಯರನ್ನು ಕರೆಸಿ,  ಅವರಿಂದ ನವ ವಧುವರರಿಗೆ ಆಶೀರ್ವದಿಸಿದ್ದಾರೆ. ಆ ಮೂಲಕ ಸಮಾಜದಲ್ಲಿದ್ದ ಮೂಢಾಚಾರವನ್ನು ವಿರೋಧಿಸಿದ್ದಾರೆ.

ಜಿತೇಂದ್ರ ಪಟೇಲ್ ಎಂಬ ಉದ್ಯಮಿಯೇ ಇಂತಹುದೊಂದು ಸಾಮಾಜಿಕ ಕಾರ್ಯ ಮಾಡಿದ್ದು, ತಮ್ಮ ಪುತ್ರ ರವಿ ಅವರ ವಿವಾಹ ಸಮಾರಂಭಕ್ಕೆ ವಿವಿಧ ಪ್ರದೇಶಗಳ ಸುಮಾರು 18 ಸಾವಿರ  ವಿಧವೆಯರನ್ನು ಆಹ್ವಾನಿಸಿದ್ದಾರೆ. ಅರಾವಳಿ, ಬನಾಸ್ಕಂತಾ, ಸಬಾರ್ ಕಂತಾ, ಪಠಾಣ್ ಮತ್ತು ಮೆಹ್ಸಾನಾ ಜಿಲ್ಲೆಗಳಿಂದ ವಿಧವೆಯರನ್ನು ಕರೆಯಿಸಿ ತಮ್ಮ ಮಗ ಮತ್ತು ಸೊಸೆಗೆ ಆಶೀರ್ವಾದ  ಕೊಡಿಸಿದ್ದಾರೆ. ಕೇವಲ ಸಮಾರಂಭಕ್ಕೆ ಆಹ್ವಾನ ಮಾಡಿದ್ದಷ್ಟೇ ಅಲ್ಲದೇ ಪ್ರತಿಯೊಬ್ಬರಿಗೂ ಹೊದಿಕೆಗಳನ್ನು ವಿತರಿಸಿದ್ದಾರೆ. ಅಷ್ಟೇ ಅಲ್ಲದೆ ತೀರಾ ಬಡತನದಲ್ಲಿರುವ 500 ವಿಧವೆಯರ  ಜೀವನೋಪಾಯಕ್ಕೆ ಹಸುಗಳನ್ನು ದಾನ ಮಾಡಿದ್ದಾರೆ.

"ಈ ಬಗ್ಗೆ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿರುವ ಜಿತೇಂದ್ರ ಪಟೇಲ್ ಅವರು, ವಿಧವೆಯರು ನನ್ನ ಮಗ ಮತ್ತು ಸೊಸೆಯನ್ನು ಹರಿಸಿದ್ದು ನನಗೆ ನಿಜಕ್ಕೂ ಅತೀವ  ಸಂತಸ ತಂದಿದೆ. ವಿಧವೆಯರನ್ನು ಸಮಾಜದಲ್ಲಿ ಕೀಳಾಗಿ ಕಾಣಲಾಗುತ್ತಿದೆ ಮತ್ತು ನಿರ್ಲಕ್ಷಿಸಲಾಗುತ್ತಿದೆ. ಶುಭ ಸಮಾರಂಭಗಳಲ್ಲಿ ಅವರ ಅಸ್ಥಿತ್ವವನ್ನು ಕೆಡುಕೆಂದು ಭಾವಿಸಲಾಗುತ್ತಿದೆ. ಇಂತಹ  ಮೂಢಾಚಾರಗಳು ಕೊನೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಈ ವಿಶೇಷ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿಧವೆಯೊಬ್ಬರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದು, ಸಮಾರಂಭಕ್ಕೆ ನನ್ನನ್ನು ಆಹ್ವಾನಿಸಿದ್ದು ನನಗೆ ನಿಜಕ್ಕೂ ಸಂತಸ  ತಂದಿದೆ. ಇನ್ನು ಕಷ್ಟದಲ್ಲಿದ್ದ ನನ್ನ ಜೀವನ ನಿರ್ವಹಣೆಗೆಂದು ಹಸುವನ್ನು ಕೊಟ್ಟಿದ್ದಾರೆ. ಹಾಲನ್ನು ಮಾರಿ ನನ್ನ ಮುಂದಿನ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾರೆ.

ಒಟ್ಟಾರೆ ಉದ್ಯಮಿ ಜಿತೇಂದ್ರ ಪಟೇಲ್ ಅವರ ಈ ಕಾರ್ಯ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಶ್ಲಾಘನೆಗೆ ಪಾತ್ರವಾಗಿದ್ದು, ವಿಧವೆಯರ ಕುರಿತು ಇರುವ ಭಾವನೆಗಳು  ಇನ್ನಾದರೂ ಬದಲಾಗ ಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com