ಜೈಪುರ: ರಾಜಸ್ತಾನದ ಶಾಸಕನ ಪುತ್ರನೋರ್ವ ಯದ್ವಾತದ್ವಾ ಕಾರು ಚಲಾಯಿಸಿದ ಪರಿಣಾಮ ಕಾರು ಆಟೋಗೆ ಢಿಕ್ಕಿ ಹೊಡೆದಿದ್ದು, ಮೂರು ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ಮುಂಜಾನೆ ಜೈಪುರದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ರಾಜಸ್ತಾನದ ಪಕ್ಷೇತರ ಶಾಸಕ ಶಿಖರ್ ನಂದ ಕಿಶೋರ್ ಪುತ್ರನಾದ ಸಿದ್ಧಾರ್ಥ್ ಮೆಹ್ರಿಯಾ ಈ ಅಪಘಾತ ಮಾಡಿದ್ದು, ಅಪಘಾತದಲ್ಲಿ ಮೂವರು ಅಸು ನೀಗಿದ್ದಾರೆ ಎಂದು ತಿಳಿದುಬಂದಿದೆ. ಶನಿವಾರ ಮುಂಜಾನೆ ಸುಮಾರು 2 ಗಂಟೆ ಸುಮಾರಿನಲ್ಲಿ ತನ್ನ BMW ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಬಂದ ಸಿದ್ಧಾರ್ಥ್ ರಸ್ತೆ ಬದಿಯಲ್ಲಿ ಸಾಗುತ್ತಿದ್ದ ಆಟೋಗೆ ಢಿಕ್ಕಿ ಹೊಡೆದಿದ್ದಾನೆ. ಈ ವೇಳೆ ಆಟೋದಲ್ಲಿದ್ದ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸುವ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಘಟನೆಯಲ್ಲಿ ಇತರೆ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸಂಭವಿಸುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತ ಸಿದ್ಧಾರ್ಥ್ ಮತ್ತೆ ಸಮೀಪದಲ್ಲಿ ಇದ್ದ ಪೊಲೀಸ್ ವ್ಯಾನ್ ಗೂ ಢಿಕ್ಕಿ ಹೊಡೆದಿದ್ದಾನೆ. ಪ್ರಸ್ತುತ ಅಪಘಾತ ಮಾಡಿದ ಸಿದ್ಧಾರ್ಥ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ.
ಆರೋಪ ನಿರಾಕರಿಸಿದ ಶಾಸಕನ ಪುತ್ರ
ಇನ್ನು ಅಪಘಾತದ ಬಳಿಕ ಪೊಲೀಸರಿಗೆ ಸಿಕ್ಕ ಸಿದ್ಧಾರ್ಥ ಅಪಘಾತದ ಸಂದರ್ಭದಲ್ಲಿ ನಾನು ಕಾರು ಚಲಾಯಿಸುತ್ತಿರಲಿಲ್ಲ. ಕಾರಿನ ಚಾಲಕ ಕಾರು ಚಲಾಯಿಸುತ್ತಿದ್ದ ಎಂದು ಹೇಳಿ ಪ್ರಕರಣದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ.
Advertisement