ಆರೋಪಿ ರಾಮ್ ಕುಮಾರ್ 3 ತಿಂಗಳಿನಿಂದಲೂ ಸ್ವಾತಿಯನ್ನು ಹಿಂಬಾಲಿಸುತ್ತಿದ್ದ: ಪೊಲೀಸ್ ಆಯುಕ್ತ
ಚೆನ್ನೈ: ಆರೋಪಿ ಪಿ. ರಾಮ್ ಕುಮಾರ್ 3 ತಿಂಗಳಿನಿಂದಲೂ ಸ್ವಾತಿ ಎಲ್ಲಿಯೇ ಹೋದರೂ ಹಿಂಬಾಲಿಸುತ್ತಿದ್ದ ಎಂದು ಚೆನ್ನೈ ಪೊಲೀಸ್ ಆಯುಕ್ತ ಟಿ.ಕೆ. ರಾಜೇಂದ್ರನ್ ಅವರು ಹೇಳಿದ್ದಾರೆ.
ಇನ್ಫೋಸಿಸ್ ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ಕುರಿತಂತೆ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಬಂಧಿತ ರಾಮ್ ಕುಮಾರ್ (22) ಮೀನಾಕ್ಷಿಪುರಂನಲ್ಲಿ ಇಂಜಿನಿಯರಿಂಗ್ ಮಾಡಿದ್ದಾನೆ. ಕೊಲೆ ಮಾಡಿದ ನಂತರ ತಲೆಮರೆಸಿಕೊಳ್ಳಲು ಆರೋಪಿ ತಿರುನೆಲ್ವೇಲಿಗೆ ಹೋಗಿದ್ದ. ಇದರಂತೆ ಖಚಿತ ಮಾಹಿತಿ ಮೇರೆಗೆ ವಿಶೇಷ ಪೊಲೀಸರು ಸ್ಥಳಕ್ಕೆ ಹೋದಾಗ ರಾಮ್ ಕುಮಾರ್ ಇದ್ದಕ್ಕಿದ್ದಂತೆ ತನ್ನ ಕತ್ತನ್ನು ಕೊಯ್ದುಕೊಂಡಿದ್ದ ಎಂದು ಹೇಳಿದ್ದಾರೆ.
ಕೂಡಲೇ ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ತೆಂಕಾಸಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ತಿರುನೆಲ್ವೇಲಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು.
ಆರೋಪಿ ರಾಮ್ ಕುಮಾರ್ ಕೊಲೆಯಾದ ಸ್ವಾತಿಯವರನ್ನು ಕಳೆದ ಮೂರು ತಿಂಗಳಿನಿಂದಲೂ ಹಿಂಬಾಲಿಸುತ್ತಿದ್ದ, ಅಲ್ಲದೆ, ಹಲವು ದಿನಗಳಿಂದಲೂ ಸ್ವಾತಿಯೊಂದಿಗೆ ಸ್ನೇಹ ಬೆಳೆಸಲು ಯತ್ನ ನಡೆಸಿದ್ದಾನೆ. ಆದರೆ, ಇದು ಸಾಧ್ಯವಾಗಿರಲಿಲ್ಲ. ಇದರಿಂದ ಬೇಸತ್ತು ಆತ ಸ್ವಾತಿಯನ್ನು ಹತ್ಯೆ ಮಾಡಿದ್ದಾನೆಂದು ಹೇಳಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಕುರಿತಂತೆ ನಮಗೆ ತಿಳಿದಿದ್ದ ಮಾಹಿತಿ ಶೂನ್ಯವಾಗಿತ್ತು. ಹೀಗಾಗಿ ನುಂಗಂಬಾಕ್ಕಂ, ಚೂಲೈಮೆಡು ಮತ್ತು ಇನ್ಫೋಸಿಸ್ ಕ್ಯಾಂಪಸ್ ನಾದ್ಯಂತ ಹುಡುಕಾಟ ಆರಂಭಿಸಿದ್ದೆವು. ಎಷ್ಟೇ ವಿಚಾರಣೆ ನಡೆಸಿದ್ದರೂ ಸಾಕ್ಷ್ಯಾಧಾರಗಳು ಲಭ್ಯವಾಗಿರಲಿಲ್ಲ. ಹೀಗಾಗಿ ಸಾರ್ವಜನಿಕರು ತಮಗೆ ತಿಳಿದಿರುವ ಯಾವುದೇ ಮಾಹಿತಿ ಅಥವಾ ವಿಚಾರವಿದ್ದರೂ ನಮ್ಮ ಬಳಿ ಹಂಚಿಕೊಳ್ಳುವಂತೆ ಮನವಿ ಮಾಡಲಾಗಿದ್ದು.
ನಮ್ಮ ಮನವಿಗೆ ನಗರದಲ್ಲಿ ಅಷ್ಟೇ ಅಲ್ಲದೆ, ರಾಜ್ಯದಾದ್ಯಂತ ಸಾಕಷ್ಟು ಬೆಂಬಲ ವ್ಯಕ್ತವಾಗಿತ್ತು. ಅಲ್ಲದೆ, ಸಾಕಷ್ಟು ಜನರು ಮಾಹಿತಿಗಳನ್ನು ನೀಡಲು ಆರಂಭಿಸಿದ್ದರು. ಇದರಿಂದ ಆರೋಪಿಯನ್ನು ಹುಡುಕುವುದು ಸುಲಭವಾಯಿತು. ಪ್ರಕರಣದಲ್ಲಿ ಕೇವಲ ಒಬ್ಬ ಆರೋಪಿಯೇ ತೊಡಗಿಕೊಂಡಿರುವುದೆಂಬ ಖಚಿತ ಮಾಹಿತಿ ನಮ್ಮ ಬಳಿ ಇತ್ತು. ರಾಮ್ ಕುಮಾರ್ ಕೊಲೆ ಮಾಡಿದ ವ್ಯಕ್ತಿಯಾಗಿದ್ದಾನೆಂದು ಸಾಬೀತುಪಡಿಸಲು ನಮ್ಮ ಬಳಿ ಬಲವಾದ ಸಾಕ್ಷ್ಯಾಧಾರಗಳಿವೆ. ಪ್ರಕರಣದಲ್ಲಿ ಇತರೆ ವ್ಯಕ್ತಿಗಳು ಭಾಗಿಯಾಗಿಲ್ಲ. ಹತ್ಯೆ ಹಿಂದಿನ ಸತ್ಯವನ್ನು ತನಿಖೆಯಿಂದ ಹೊರಬರಬೇಕಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ