ಸಿಖ್ ಪವಿತ್ರ ಗ್ರಂಥಕ್ಕೆ ಚುನಾವಣಾ ಪ್ರಣಾಳಿಕೆಯ ಹೋಲಿಕೆ: ಆಪ್ ಮುಖಂಡನ ವಿರುದ್ಧ ಪ್ರಕರಣ ದಾಖಲು
ಚಂಡೀಗಢ: ಸಿಖ್ ಸಮುದಾಯದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದ ಆಮ್ ಆದ್ಮಿ ಪಕ್ಷದ ನಾಯಕ ಆಶಿಶ್ ಖೈತಾನ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಪಂಜಾಬ್ ಚುನಾವಣೆಗಾಗಿ ಸಿದ್ಧಪಡಿಸಲಾಗಿರುವ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಸಿಖ್ ಸಮುದಾಯದ ಪವಿತ್ರ ಗ್ರಂಥ ಗುರು ಗ್ರಂಥ ಸಾಹಿಬ್ ಗೆ ಹೋಲಿಸಿದ್ದರಿಂದ ಆಶಿಶ್ ಖೈತಾನ್ ವಿರುದ್ಧ ಪೊಲೀಸರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪದ ಅಡಿ ಪ್ರಕರಣ ದಾಖಲಿಸಿದ್ದಾರೆ.
ಅಮೃತ್ ಸರದಲ್ಲಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವ ವೇಳೆ ಆಮ್ ಆದ್ಮಿ ಪಕ್ಷದ ನಾಯಕ ಆಶಿಶ್ ಖೈತಾನ್ ಪ್ರಣಾಳಿಕೆಯನ್ನು ಗುರುಗ್ರಂಥ ಸಾಹಿಬ್ ಗೆ ಹೋಲಿಸಿದ್ದರು. ಪರಿಣಾಮ ಆಮ್ ಆದ್ಮಿ ಪಕ್ಷದ ನಾಯಕನ ವಿರುದ್ಧ ಸೆಕ್ಷನ್ 295 ಎ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಣಾಳಿಕೆಯನ್ನು ಸಿಖ್ ಸಮುದಾಯದ ಪವಿತ್ರ ಗ್ರಂಥಕ್ಕೆ ಹೋಲಿಸಿ ಪ್ರಣಾಳಿಕೆ ಪುಸ್ತಕದ ಮುಖಪುಟದಲ್ಲಿ ಗೋಲ್ಡನ್ ಟೆಂಪಲ್ ನ ಚಿತ್ರ ಬಳಕೆ ಮಾಡಿದ್ದಕ್ಕಾಗಿ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ, ಆಮ್ ಆದ್ಮಿ ಪಕ್ಷ ಕ್ಷಮೆ ಯಾಚಿಸಿತ್ತು. ಅಷ್ಟೇ ಅಲ್ಲದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಉದ್ದೇಶ ಇರಲಿಲ್ಲ ಎಂದು ಸ್ಪಷ್ಟನೆ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ