ಕಾನ್ಪುರ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕುರಿತು ಉಂಟಾದ ಜಗಳದಿಂದ ಜೋಡಿಗಳಿಬ್ಬರು ತಮ್ಮ ಮದುವೆ ಮುರಿದುಕೊಂಡ ಘಟನೆ ಮಹಾರಾಷ್ಟ್ರದ ಕಾನ್ಪುರದಲ್ಲಿ ನಡೆದಿದೆ.
ವರ ಸ್ವಂತ ಉದ್ಯಮಿ. ವಧು ಸರ್ಕಾರಿ ನೌಕರಿಯಲ್ಲಿದ್ದಾಳೆ. ಮದುವೆ ಸಮಾರಂಭದ ಖರ್ಚುವೆಚ್ಚಗಳನ್ನು ಹಂಚಿಕೊಳ್ಳಲು ಹುಡುಗ-ಹುಡುಗಿ ನಿರ್ಧರಿಸಿದ್ದರು. ಅದರಂತೆ ದೇವಸ್ಥಾನವೊಂದರಲ್ಲಿ ಭೇಟಿಯಾಗಿ ಪರಸ್ಪರ ಚರ್ಚಿಸಿ ಯಾರು ಎಷ್ಟು ಖರ್ಚು ಮಾಡುವುದು, ಹೇಗೆ ಎಂದು ಅಂತಿಮಗೊಳಿಸಲು ತೀರ್ಮಾನಿಸಿದರು.
ಅದರಂತೆ ದೇವಸ್ಥಾನಕ್ಕೆ ಹೋದರು. ಆರಂಭದಲ್ಲಿ ಇಬ್ಬರ ನಡುವೆ ಸಂಭಾಷಣೆ, ಮಾತುಕತೆ ಸಹಜವಾಗಿ ಸಾಗುತ್ತಿತ್ತು. ಯಾವಾಗ ದೇಶದ ಆರ್ಥಿಕ ಕುಸಿತ ವಿಷಯ ಬಂತೋ ಆಗ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯವುಂಟಾಗಿ ಅದು ತಾರಕಕ್ಕೆ ಹೋಯಿತು.
ದೇಶದ ಆರ್ಥಿಕ ಕುಸಿತಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಕಾರಣ ಎಂದು ಯುವತಿ ಹೇಳಿದಳು. ಅದು ಯುವಕನಿಗೆ ಸಿಟ್ಟು ತರಿಸಿತು.ಆತ ಮೋದಿಯ ಕಟ್ಟಾ ಅಭಿಮಾನಿ. ಹೀಗಾಗಿ ಇಬ್ಬರ ಮಧ್ಯೆ ಚರ್ಚೆ, ವಾಗ್ವಾದ ನಡೆಯಿತು. ಕೊನೆಗೆ ಇಬ್ಬರೂ ದೂರವಾಗಲು ನಿರ್ಧರಿಸಿದರು.