ಹೈದರಾಬಾದ್: ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಅ್ಯಂಡ್ ಇರಾನ್ ಉಗ್ರರು ನರಕದ ನಾಯಿಗಳು ಎಂದು ಆಲ್ ಇಂಡಿಯಾ ಮಜ್ಲಿಸ್-ಇ-ಇತ್ತೆಹದ್-ಉಲ್ ಮುಸ್ಲಿಂ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಓವೈಸಿಯವರು ಶುಕ್ರವಾರ ಹೇಳಿದ್ದಾರೆ.
ಸೌದಿಯ ಮದೀನಾ ನಗರದಲ್ಲಿ ನಡೆದ ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಮುಸ್ಲಿಂ ಯುವಕರು ಇಸ್ಲಾಂಗಾಗಿ ಬದುಕಬೇಕೇ ವಿನಃ ಸಾಯಬಾರದು. ಮಾನವೀಯತೆಯಿಂದ ಬದುಕಬೇಕು. ಇದು ನಮ್ಮ ದೇಶ. ಒಗ್ಗಟ್ಟಿನಿಂದ ಬದುಕಬೇಕು ಎಂದು ಹೇಳಿದ್ದಾರೆ.
ಇಸಿಸ್ ಉಗ್ರರು ಇಸ್ಲಾಂ ವಿರೋಧಿಗಳಾಗಿದ್ದು, ನರಕದ ನಾಯಿಗಳಾಗಿದ್ದಾರೆ. ನಿಜಕ್ಕೂ ನಿಮಗೆ ಜಿಹಾದ್ ಬೇಕಿದ್ದರೆ, ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳಬೇಡಿ. ಅದರ ಬದಲು ಬಡಜನರಿಗೆ ಊಟ ಹಾಕಿ. ಅವರ ಏಳಿಗಾಗಿ ಕೆಲಸ ಮಾಡಿ. ಅವರ ಹೆಣ್ಣು ಮಕ್ಕಳ ಮದುವೆಗೆ ಧನ ಸಹಾಯ ಮಾಡಿ. ಇದು ನಿಜವಾದ ಜಿಹಾದ್ ಆಗಿದೆ.
ಇಸಿಸ್ ಉಗ್ರರು ಇಸ್ಲಾಂ ತತ್ವ ಹಾಗೂ ಅದರ ಆದರ್ಶಗಳಿಗೆ ಏನನ್ನೂ ಮಾಡಲು ಸಾಧ್ಯವಿಲ್ಲ. ಉಗ್ರರು ತಮ್ಮ ಚಟುವಟಿಕೆಗಳು ಹಾಗೂ ದಾಳಿಯಂತಹ ಕೃತ್ಯಗಳಿಂದ ಇಸ್ಲಾಂ ಧರ್ಮದ ಬೇರನ್ನು ಮುಟ್ಟಲು ಸಾಧ್ಯವಾಗುವುದಿಲ್ಲ. ಇಂತಹವರು ಇಸ್ಲಾಂ ಹೆಸರಿಟ್ಟುಕೊಂಡು ಇಸ್ಲಾಂ ಹೆಸರಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
Advertisement