ಕರೂರ್: ಕರ್ನಾಟಕ ನೋಂದಣಿಯಿರುವ ಸಾವಿರಾರು ಕೋಟಿ ಹಣ ತುಂಬಿದ 40 ಫೀಟ್ ಉದ್ದದ ಎರಡು ಕಂಟೈನೆರ್ ಲಾರಿಗಳು ತಾಂತ್ರಿಕ ತೊಂದರೆಯಿಂದ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ನಿಂತಿದ್ದು, ತೀವ್ರ ಆತಂಕ ಸೃಷ್ಟಿಸಿದೆ.
ಆರ್ ಬಿಐ ಸೂಚನೆಯಂತೆ ಮೈಸೂರಿನಿಂದ ತ್ರಿವೇಂದ್ರಂ ಹಣ ಸಾಗಿಸುತ್ತಿದ್ದ ಎರಡು ಕಂಟೈನೆರ್ ಗಳ ಪೈಕಿ ಒಂದು ಕೆಟ್ಟು ನಿಂತಿದೆ ಎಂದು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಆ ಲಾರಿಗಳಲ್ಲಿ ಎಷ್ಟು ಹಣವಿದೆ ಎಂಬುದನ್ನು ಮಾತ್ರ ಹೇಳಿಲ್ಲ.
ಹಣ ಸಾಗಿಸುತ್ತಿದ್ದ ಎರಡು ಲಾರಿಗಳಿಗೆ 8 ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ರಕ್ಷಣೆ ಒದಗಿಸಿದ್ದು, ಕರೂರ್ ನಿಂದ 20 ಕಿ.ಮೀ.ದೂರದಲ್ಲಿ ಒಂದು ಲಾರಿಯ ಆಕ್ಸಲ್ ಕಟ್ ಆಗಿದ್ದರಿಂದ ಮಂಗಳವಾರ ಸಂಜೆಯಿಂದ ಎರಡು ಲಾರಿಗಳನ್ನು ಇಲ್ಲಿಯೇ ನಿಲ್ಲಿಸಲಾಗಿದೆ.
ದಿಂಡಿಗಲ್ ನಿಂದ ಮೆಕ್ಯಾನಿಕ್ ಆಗಮಿಸಿದ್ದು, ಆಕ್ಸೆಲ್ ಅನ್ನು ಮಧುರೈನಿಂದ ತರಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಹಣದ ತುಂಬಿದ ಲಾರಿ ಕೆಟ್ಟು ನಿಂತಿರುವ ಮಾಹಿತಿ ಬಂದಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂದಿತಾ ಪಾಂಡೆ ಅವರು ಎರಡೂ ವಾಹನಗಳಿಗೆ ಪೊಲೀಸ್ ಭದ್ರತೆ ಒದಗಿಸಿದ್ದಾರೆ.