ದೇವರಿಗೆ ಅವಮಾನ ಮಾಡಿದ ಆರೋಪ: ಮುಸ್ಲಿಂ ಲೇಖಕನ ಮೇಲೆ ಹಲ್ಲೆ
ಕೊಚ್ಚಿ: ದೇವರಿಗೆ ಅವಮಾನ ಮಾಡಿರುವುದಾಗಿ ಆರೋಪಿಸಿ ಗುಂಪೊಂದು ಮುಸ್ಲಿಂ ಲೇಖಕನ ಮೇಲೆ ಹಲ್ಲೆ ಮಾಡಿರುವ ಘಟನೆ ಕೇರಳದ ಪಲಕ್ಕಾಡ್ ಜಿಲ್ಲೆಯಲ್ಲಿ ನಡೆದಿದೆ.
ಕೇರಳದ ಕೊತ್ತನಾಡು ಬಸ್ ಸ್ಟಾಪ್ ನಲ್ಲಿ ಬಸ್ ಗಾಗಿ ಕಾಯುತ್ತಿದ್ದ ಲೇಖಕ ಜಿಮ್ಶಾರ್ ಮೇಲೆ ಹಲ್ಲೆ ನಡೆಸಲಾಗಿದೆ. ಕಾದಂಬರಿಯ ಶೀರ್ಷಿಕೆಯಲ್ಲಿ ಪಡೋಚನ್ (ಸೃಷ್ಟಿಕರ್ತ) ಎಂಬ ಶಬ್ದ ಬಳಸಿದ್ದಕ್ಕೆ, ದೇವರಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಗುಂಪೊಂದು ಹಲ್ಲೆ ನಡೆಸಿದೆ.
ಲೇಖಕ ಪಿ. ಜಿಮ್ಶಾರ್ ತನ್ನ ಹೊಸ ಕಾದಂಬರಿ ಪಡಚೋಂಡೆ ಚಿತ್ರಪ್ರದರ್ಶನಂ ಪುಸ್ತಕದ ಮುಖಪುಟವನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿದ ಬಳಿಕ ಅವರಿಗೆ ಬೆದರಿಕೆ ಸಂದೇಶಗಳು ಬರುತ್ತಿದ್ದವು. ಭಾನುವಾರ ರಾತ್ರಿ ಅವರು ಪಾಲಕ್ಕಾಡಿನ ಕೂತ್ತನಾಡು ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಓರ್ವ ಅಪರಿಚಿತ ವ್ಯಕ್ತಿ ಬಂದು ಅವರನ್ನು ಮಾತಿಗೆಳೆದ. ಅವರ ನಡುವೆ ಮಾತುಕತೆ ನಡೆಯುತ್ತಿದ್ದಂತೆ ಮತ್ತೆ ಮೂವರು ಅಲ್ಲಿಗೆ ಬಂದು ಜಿಮ್ಶಾನ್ ಮೇಲೆ ಹಲ್ಲೆ ಮಾಡಿದರು.
ದೇವರ ಕುರಿತು ಬರೆಯುವ ಉದ್ಧಟತನ ತೋರಿಸುತ್ತೀಯಾ ಎಂದು ಕೇಳಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಲೇಖಕ ಪ್ರಜ್ಞೆ ತಪ್ಪಿದ ಬಳಿಕ ಅವರು ಅಲ್ಲಿಂದ ಪಲಾಯನ ಮಾಡಿದರು. ರಸ್ತೆಯಲ್ಲಿ ಬಿದ್ದಿದ್ದ ಲೇಖಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಲೇಖಕ ಪೊಲೀಸರಿಗೆ ದೂರು ನೀಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ