ನವದೆಹಲಿ: ಭಾರತವನ್ನು ಭದ್ರತೆ ಹಾಗೂ ಸುರಕ್ಷತೆಯ ಸ್ವರ್ಗ ಎಂದು ಬಣ್ಣಿಸಿರುವ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ, ಜಾತಿ, ಧರ್ಮಗಳ ಹೆಸರಿನಲ್ಲಿ ಯಾವುದೇ ರೀತಿಯ ಸಾಮಾಜಿಕ ಘರ್ಷಣೆಗಳು ಭಾವನಾತ್ಮಕವಾಗಿ ಉದ್ರೇಕಗೊಳಿಸಿ, ದೇಶದ ಅಭಿವೃದ್ಧಿ ಉದ್ದೇಶಕ್ಕೆ ಮಾರಕವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಕಾಶ್ಮೀರ ಹಾಗೂ ಈಶಾನ್ಯ ರಾಜ್ಯಗಳಲ್ಲಿ ನಾವು ನುಸುಳುಕೋರರ ಸಮಸ್ಯೆ ಎದುರಿಸುತ್ತಿದ್ದೇವೆ, ಆದರೆ ವಿಶ್ವದ ಯಾವುದೇ ದೇಶಕ್ಕೆ ಹೋಲಿಸಿದರೆ ಭಾರತ ಭದ್ರತೆ ಹಾಗೂ ಸುರಕ್ಷತೆಯ ವಿಷಯದಲ್ಲಿ ಸ್ವರ್ಗವಾಗಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಇಸ್ಲಾಮಿಕ್ ಸಾಂಸ್ಕೃತಿಕ ಕೇಂದ್ರದ ಡಾ.ಎಪಿಜೆ ಅಬ್ದುಲ್ ಕಲಾಂ ಮೆಮೋರಿಯಲ್ ನಲ್ಲಿ ಮಾತನಾಡಿರುವ ಅರುಣ್ ಜೇಟ್ಲಿ, ಭದ್ರತೆಗಾಗಿ ಹೆಚ್ಚು ಖರ್ಚು ಮಾಡುವ ಬದಲು ಬಡತನ ನಿರ್ಮೂಲನೆ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಖರ್ಚು ಮಾಡಬೇಕಿದೆ ಎಂದು ಹೇಳಿದ್ದಾರೆ.
ಭಾರತ ವೇಗಗತಿಯಲ್ಲಿ ಅಭಿವೃದ್ಧಿಯಾಗಬೇಕಿದ್ದರೆ ಸಾಮಾಜಿಕ ಘರ್ಷಣೆಯನ್ನು ತಪ್ಪಿಸಬೇಕಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದಾರೆ. ಸಾಮಾಜಿಕ ಘರ್ಷಣೆಗಳನ್ನು ತಪ್ಪಿಸುವುದು ದೇಶದ ಸಾಮಾಜಿಕ ವಲಯದ ಪ್ರಬುದ್ಧತೆಯನ್ನು ಸಹ ಸೂಚಿಸುತ್ತದೆ ಎಂದು ಅರುಣ್ ಜೇಟ್ಲಿ ಅಭಿಪ್ರಾಯಪಟ್ಟಿದ್ದಾರೆ.
Advertisement