ಕೊಚ್ಚಿ: ಮಾಜಿ ಸಚಿವ ಹಾಗೂ ಕೇರಳ ವಿಧಾನಸಭೆ ಮಾಜಿ ಸ್ಪೀಕರ್ ಟಿ.ಎಸ್.ಜಾನ್ ಅವರು ಗುರುವಾರ ನಿಧನರಾಗಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಕೇರಳ ಕಾಂಗ್ರೆಸ್(ಸೆಕ್ಯೂಲರ್)ನ ಅಧ್ಯಕ್ಷ ಜಾನ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ 76 ವರ್ಷದ ಜಾನ್ ಅವರು ಇಂದು ಕೊನೆಯುಸಿರೆಳೆದಿದ್ದಾರೆ.
1977-78ರಲ್ಲಿ ಎ.ಕೆ.ಆಂಟನಿ ಮತ್ತು ಪಿಕೆ ವಸುದೇವನ್ ನಾಯರ್ ನೇತೃತ್ವದ ಸರ್ಕಾರದ ಜಾನ್ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾಗಿದ್ದರು.
ವೃತ್ತಿಯಲ್ಲಿ ವಕೀಲರಾಗಿದ್ದ ಜಾನ್ ಅವರು ಕೇರಳ ಕಾಂಗ್ರೆಸ್ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದು, ಕಲೂಪ್ಪಾರ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.