ಅಹ್ಮದಾಬಾದ್: ಜೂನ್ 17ರಂದು ಗೋದ್ರೋತ್ತರ ಹಿಂಸಾಚಾರದ ವೇಳೆ ಗುಲ್ಬರ್ಗ್ ಸೊಸೈಟಿಯಲ್ಲಿ ನಡೆದಿದ್ದ ಹತ್ಯಾಕಾಂಡ ಪ್ರಕರಣದ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಘೋಷಣೆ ಮಾಡುವುದಾಗಿ ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಸೋಮವಾರ ಹೇಳಿದೆ.
2002ರ ಗುಜರಾತ್ ಹಿಂಸಾಚಾರ ವೇಳೆ ಕಾಂಗ್ರೆಸ್ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ 69 ಮಂದಿಯ ಧಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ ಆರೋಪಿಗಳ ಪರ-ವಿರೋಧ ವಕೀಲರ ವಾದಗಳನ್ನು ಆಲಿಸಿದ ಅಹ್ಮದಾಬಾದ್ ವಿಶೇಷ ನ್ಯಾಯಾಲಯ ಶಿಕ್ಷೆ ಪ್ರಮಾಣದ ಘೋಷಣೆಯನ್ನು ಇದೇ ಶುಕ್ರವಾರ ಜೂನ್ 17ಕ್ಕೆ ಮುಂದೂಡಿದೆ. ಶಿಕ್ಷೆ ಪ್ರಮಾಣ ಘೋಷಣೆ ಕುರಿತಂತೆ ಕಳೆದ 2 ಬಾರಿ ನಡೆದಿದ್ದ ವಿಚಾರಣೆ ವೇಳೆ ಡಿಫೆನ್ಸ್ ಮತ್ತು ಪ್ರಾಸಿಕ್ಯೂಷನ್ ಪರ ವಕೀಲರ ವಾದ ಆಲಿಸಿದ್ದ ವಿಶೇಷ ನ್ಯಾಯಮೂರ್ತಿ ಪಿಬಿ ದೇಸಾಯಿ ಅವರು ಆರೋಪಿಗಳಿಗೆ ಶಿಕ್ಷೆ ಪ್ರಮಾಣವನ್ನು ಜೂನ್ 17ಕ್ಕೆ ಘೋಷಣೆ ಮಾಡುವುದಾಗಿ ಹೇಳಿ ನ್ಯಾಯಾಲಯದ ಕಲಾಪವನ್ನು ಮುಂದೂಡಿದರು.
ಪ್ರಕರಣ ಸಂಬಂಧ ಕಳೆದ ಜೂನ್ 2ರಂದು ತನ್ನ ಅಂತಿಮ ತೀರ್ಪು ನೀಡಿದ್ದ ನ್ಯಾಯಾಲಯ ಒಟ್ಟು 50 ಮಂದಿ ಆರೋಪಿಗಳ ಪೈಕಿ 36 ಮಂದಿಯನ್ನು ಸಾಕ್ಷ್ಯಾಧಾರದ ಕೊರತೆಯಿಂದಾಗಿ ಖುಲಾಸೆ ಮಾಡಿ 24 ಮಂದಿ ಆರೋಪಗಳು ಎಂದು ಘೋಷಿಸಿತ್ತು. ಈ ಪೈಕಿ 11 ಆರೋಪಿಗಳ ವಿರುದ್ಧ ಕೊಲೆ ಆರೋಪ ದಾಖಲಾಗಿದ್ದು, ಉಳಿದ 13 ಮಂದಿಯ ವಿರುದ್ಧ ಇತರೆ ಆರೋಪಗಳು ಸಾಬೀತಾಗಿದ್ದವು.
2002ರಲ್ಲಿ ನಡೆದ ಗೋದ್ರಾ ಹತ್ಯಾಕಾಂಡಕ್ಕೆ ಪ್ರತಿಯಾಗಿ ನಡೆದ ಗೋದ್ರೋತ್ತರ ಹತ್ಯಾಕಾಂಡಗಳಲ್ಲಿ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ ಪ್ರಮುಖ ಪ್ರಕರಣವಾಗಿದೆ. ಈ ಹತ್ಯಾಕಾಂಡದಲ್ಲಿ ಕಾಂಗ್ರೆಸ್ನ ಮಾಜಿ ಸಂಸದ ಎಹ್ಸಾನ್ ಜಾಫ್ರಿ ಸೇರಿದಂತೆ ಸುಮಾರು 69 ಮಂದಿಯನ್ನು ಧಾರುಣವಾಗಿ ಕೊಲ್ಲಲಾಗಿತ್ತು. ಈವರೆಗೂ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ನಾಲ್ಕು ಮಂದಿ ನ್ಯಾಯಾಧೀಶರ ಬದಲಾವಣೆಯಾಗಿದ್ದು, ಇಂದು ತೀರ್ಪು ನೀಡಿರುವ ನ್ಯಾ. ಪಿಬಿ ದೇಸಾಯಿ 5ನೇ ನ್ಯಾಯಾಧೀಶರಾಗಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ದೇಸಾಯಿ ಅವರು ಪ್ರಕರಣದ ವಿಚಾರಣೆ ಆರಂಭಿಸಿದ್ದರು.
Advertisement