ಗುವಾಹತಿ: ಮೇಘಾಲಯದ ಪೂರ್ವ ಕಾಶಿ ಹಿಲ್ಸ್ ಜಿಲ್ಲೆಯಲ್ಲಿ ಬಸ್ವೊಂದು ಸುಮಾರು 500 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಮತ್ತು 11 ಮಂದಿ ಗಾಯಗೊಂಡಿದ್ದಾರೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ 9.45ರ ಸುಮಾರಿಗೆ ಈ ಅಪಘಾತ ಸಂಭವಿಸಿದ್ದು, ಸಿಲ್ಚರ್ ನಿಂದ ಅಸ್ಸಾಂನ ಗುವಾಹತಿಗೆ ತೆರಳುತ್ತಿದ್ದ ಬಸ್ ಮೇಘಾಲಯದ ಗಡಿಗೆ ಹೊಂದಿಕೊಂಡಂತಿರುವ ಸೋನಾಪುರ್ ಬಳಿ ಕಣಿವೆಗೆ ಉರುಳಿದೆ ಎಂದು ಮೇಘಾಲಯ ಪೊಲೀಸ್ ಮಹಾ ನಿರ್ದೇಶಕ ರಾಜೀವ್ ಮೆಹ್ತಾ ಅವರು ಹೇಳಿದ್ದಾರೆ.
ಇಂದು ಬೆಳಗ್ಗೆ ಬಿಎಸ್ ಎಫ್ ಸಿಬ್ಬಂದಿ ಧಾವಿಸಿದ್ದು, ಸ್ಥಳೀಯ ನೆರವಿನೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಶಿಲಾಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಳೆ ಬರುತ್ತಿರುವುದರಿಂದ ಮತ್ತು ಕಣಿವೆ ಸಾಕಷ್ಟು ಆಳವಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೊಡಕಾಗುತ್ತಿದೆ ಎಂದು ಕಾಶಿ ಹಿಲ್ಸ್ ಜಿಲ್ಲೆಯ ಎಸ್ಪಿ ಲೆಥೀಂದ್ರ ಸಂಗ್ಮಾ ಅವರು ತಿಳಿಸಿದ್ದಾರೆ.