ಮಣಿಪಾಲ: ದುರ್ಗಂಧ ಹಾಗೂ ಅಶುಚಿತ್ವ ಶೌಚಾಲಯ ವ್ಯವಸ್ಥೆಯನ್ನು ಬದಲಾವಣೆ ಮಾಡಲು ಹೊಸ ಮಾದರಿಯ ಶೌಚಾಲಯ ವಿನ್ಯಾಸಕ್ಕಾಗಿ ರೈಲ್ವೆ ಇಲಾಖೆ ನಡೆಸಿದ್ದ ಸ್ಪರ್ಧೆಯಲ್ಲಿ ಕರ್ನಾಟಕದ ಮಣಿಪಾಲ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ವಿನೋದ್ ಆಂಟನಿ ಥಾಮಸ್ ಎರಡನೇ ಸ್ಥಾನ ಪಡೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛ ಭಾರತದ ಭಾಗವಾಗಿ ರೈಲ್ವೆಯಲ್ಲಿ ಪ್ರಸ್ತುತ ಇರುವ ಶೌಚಾಲಯಗಳನ್ನು ದುರ್ಗಂಧ ಹಾಗೂ ಅಶುಚಿತ್ವ ಮುಕ್ತವನ್ನಾಗಿಸಲು ಹೊಸ ವಿನ್ಯಾಸವನ್ನು ವಿದ್ಯಾರ್ಥಿಗಳಿಂದಲೇ ಪಡೆಯಲು ಮುಂದಾಗಿದ್ದ ರೈಲ್ವೆ ಇಲಾಖೆ ಇದಕ್ಕಾಗಿ ಸ್ಪರ್ಧೆ ಆಯೋಜಿಸಿತ್ತು.
ಸಂಶೋಧನೆ ವಿನ್ಯಾಸ ಹಾಗೂ ಗುಣಮಟ್ಟದ ಸಂಸ್ಥೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ 10 ವಿದ್ಯಾರ್ಥಿಗಳು ವಿನ್ಯಾಸ ರೂಪಿಸಿ ಸಂಸ್ಥೆಗೆ ನೀಡಿದ್ದರು. ಈ ಪೈಕಿ ಮಣಿಪಾಲ ವಿಶ್ವವಿದ್ಯಾನಿಲಯದ ಆರ್ಕಿಟೆಕ್ಚರ್ ವಿಭಾಗದ ವಿದ್ಯಾರ್ಥಿ ವಿನೋದ್ ಆಂಟನಿ ಥಾಮಸ್ ಅತ್ಯುತ್ತಮ ವಿನ್ಯಾಸ ಸಿದ್ಧಪಡಿಸಿದ್ದು ಎರಡನೇ ಬಹುಮಾನ ( ರೂ.75 ಸಾವಿರ ನಗದು) ಗಳಿಸಿದ್ದಾರೆ.
ರಾಹುಲ್ ಗರ್ಗ್ ಎಂಬ ಮತ್ತೋರ್ವ ವಿದ್ಯಾರ್ಥಿ ಸಹ ವಿನೋದ್ ಅವರೊಂದಿಗೆ ಎರಡನೇ ಬಹುಮಾನವನ್ನು ಹಂಚಿಕೊಂಡಿದ್ದಾರೆ. ರೈಲ್ವೆ ಶೌಚಾಲಯಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿರುವ ಅಶುಚಿತ್ವ ಹಾಗೂ ದುರ್ಗಂಧವನ್ನು ಹೋಗಲಾಡಿಸುವುದಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ವಿನೋದ್ ರೂಪಿಸಿರುವ ಶೌಚಾಲಯಗಳ ವಿನ್ಯಾಸ ರೂಪಿಸಿದ್ದಾರೆ. ವಿನೋದ್ ಸಿದ್ಧಪಡಿಸಿರುವ ಯೋಜನೆ ಪ್ರಕಾರ ರೈಲ್ವೆಯಲ್ಲಿ ಪರಿಣಾಮಕಾರಿಯಾದ ಪ್ಲಶಿಂಗ್ ಇಲ್ಲದೇ ಇರುವುದು ದುರ್ಗಂಧ ಹಾಗೂ ಅಶುಚಿತ್ವಕ್ಕೆ ಪ್ರಮುಖಕಾರಣವಾಗಿದೆ.
ತ್ಯಾಜ್ಯ ನಿರ್ವಹಣೆಗಾಗಿ ಹೊಸ ಮಾದರಿಯನ್ನು ಪರಿಚಯಿಸಿರುವ ವಿನೋದ್, ಪ್ಲಶಿಂಗ್ ಬದಲು ತ್ಯಾಜ್ಯವನ್ನು ಕೊಂಡೊಯ್ಯುವ ವ್ಯವಸ್ಥೆಯನ್ನು ಪರಿಚಯಿಸಿದ್ದಾರೆ. ಶೌಚಾಲಯದ ತ್ಯಾಜ್ಯವನ್ನು ಒಂದೆಡೆ ಸೇರಿಸಿ ಅದನ್ನು ಕ್ರ್ಯಾಂಕ್ ವೀಲ್ ಮೂಲಕ ವಿಲೇವಾರಿ ಮಾಡುವ ವ್ಯವಸ್ಥೆಯನ್ನು ವಿನೋದ್ ರೂಪಿಸಿದ್ದಾರೆ. ಈ ವ್ಯವಸ್ಥೆಗಾಗಿ ಈಗಾಗಲೇ ಬೃಹತ್ ಗಾತ್ರದ ಕಸದ ಬುಟ್ಟಿಯನ್ನು ವಿನ್ಯಾಸಗೊಳಿಸಲಾಗಿದೆ. ವಿನೋದ್ ಆಂಟನಿ ಥಾಮಸ್ ಗೆ ರೈಲ್ವೆ ಇಲಾಖೆ ನಡೆಸಿರುವ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಸಿಕ್ಕಿರುವುದು ಸಂತಸದ ವಿಷಯ ಎಂದು ಮಣಿಪಾಲ ವಿವಿಯ ಆರ್ಕಿಟೆಕ್ಚರ್ ವಿಭಾಗದ ನಿರ್ದೇಶಕ ನಿಶಾಂತ್ ಹೇಳಿದ್ದಾರೆ.
Advertisement