ಬೆಂಗಳೂರು: ಸಚಿವ ಸಂಪುಟದಿಂದ ಕೈಬಿಟ್ಟ ಹಿನ್ನೆಲೆಯಲ್ಲಿ ತೀವ್ರ ಬೇಸರಗೊಂಡಿರುವ ಹಿರಿಯ ದಲಿತ ನಾಯಕ ಶ್ರೀನಿವಾಸಪ್ರಸಾದ್ ಹಾಗೂ ಒಕ್ಕಲಿಗರ ನಾಯಕ ಅಂಬರೀಶ್ ಅವರು ಬುಧವಾರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಇದಾದ ನಂತರ ಸಂಜೆಯ ವೇಳೆಗೆ ಕಾಂಗ್ರೆಸ್ ಅತೃಪ್ತ ಶಾಸಕರ ಸಭೆ ನಡೆಸುವ ಸಾಧ್ಯತೆಯಿದೆ.
ಅಂಬರೀಶ್ ಅವರನ್ನು ಭೇಟಿ ಮಾಡಲು ಮೈಸೂರಿನಿಂದ ನಗರಕ್ಕೆ ಆಗಮಿಸಲಿರುವ ಶ್ರೀನಿವಾಸ ಪ್ರಸಾದ್ ಅವರು ಬುಧವಾರ ಬೆಳಗ್ಗೆ ಭೇಟಿ ಮಾಡಲಿದ್ದಾರೆ. ಈ ಭೇಟಿಯ ನಂತರ ಅತೃಪ್ತ ಶಾಸಕರ ಮುಂದಿನ ಕಾರ್ಯಯೋಜನೆ ರೂಪುಗೊಳ್ಳಲಿದೆ. ಒಂದು ವೇಳೆ ಈ ನಾಯಕರು ಅತೃಪ್ತರ ನಾಯಕತ್ವ ವಹಿಸಿಕೊಳ್ಳಲು ಮುಂದಾದರೆ ಸಂಜೆಯ ವೇಳೆಗೆ ಈಗಾಗಲೇ ಅತೃಪ್ತಿ ವ್ಯಕ್ತಪಡಿಸಿರುವ ಖಮರುಲ್ ಇಸ್ಲಾಂ, ಮಾಲೀಕಯ್ಯ ಗುತ್ತೇದಾರ್ ಶಿವಮೂರ್ತಿ ನಾಯಕ್, ಎಸ್.ಟಿ.ಸೋಮಶೇಖರ್ ಸೇರಿದಂತೆ ಸುಮಾರು 20 ಶಾಸಕರು ಸಭೆಯೊಂದನ್ನು ನಡೆಸುವ ಸಾಧ್ಯತೆಯಿದೆ. ಇದಾದ ನಂತರ ಅತೃಪ್ತರ ಮುಂದಿನ ಹೆಜ್ಜೆಗಳು ಸ್ಪಷ್ಟಗೊಳ್ಳಲಿವೆ ಎಂದು ಮೂಲಗಳು ತಿಳಿಸಿವೆ
ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಮುಂದಿನ ಹೆಜ್ಜೆಯ ಬಗ್ಗೆ ಚರ್ಚಿಸಲು ರಾಜ್ಯಸಭೆ ಸದಸ್ಯ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿ ಮಾಡಲಿದ್ದಾರೆ. ಈ ನಡುವೆ ಸಿದ್ದರಾಮಯ್ಯ ಪರವಾಗಿ ಮಂಗಳವಾರ ರಾತ್ರಿ ಅಂಬರೀಶ್ ಅವರನ್ನು ಭೇಟಿ ಸಚಿವ ಎಂ.ಬಿ.ಪಾಟೀಲ್ ಹಾಗೂ ಶಾಸಕ ಗೋವಿಂದರಾಜು ಭೇಟಿ ಆದರು.
Advertisement