
ಹೈದರಾಬಾದ್: ಮುತ್ತಿನ ನಗರಿ ಹೈದರಾಬಾದ್ ನಲ್ಲಿ ಬಂಧಿತರಾಗಿರುವ ಉಗ್ರರ ಗುಂಪು ಇಸ್ಲಾಮಿಕ್ ಸ್ಟೇಟ್ ಆಫ್ ಇರಾನ್ ಅ್ಯಂಡ್ ಇರಾಕ್ (ಇಸಿಸ್) ಉಗ್ರ ಸಂಘಟನೆ ನಾಯಕರ ನೇರ ಸಂಪರ್ಕವನ್ನು ಹೊಂದಿದ್ದರು ಎಂಬ ಸ್ಫೋಟಕ ಮಾಹಿತಿಯೊಂದು ಬಹಿರಂಗವಾಗಿದೆ.
ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಕರ್ನಾಟಕ ಮತ್ತು ಹೈದರಾಬಾದ್ ತಂಡಗಳು ಮಂಗಳವಾರ ಮಧ್ಯರಾತ್ರಿ ಏಕಕಾಲದಲ್ಲಿ ನಡೆಸಿದ ಜಂಟಿ ಕಾರ್ಯಚರಣೆಯಲ್ಲಿ ಇಸಿಸ್ ಉಗ್ರ ಸಂಘಟನೆ 11 ಮಂದಿ ಉಗ್ರರನ್ನು ಬಂಧನಕ್ಕೊಳಪಡಿಸಿದ್ದರು. ದಾಳಿ ವೇಳೆ ಉಗ್ರರು ಸಂಗ್ರಹಿಸಿದ್ದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳು, ಸ್ಫೋಟಕಗಳು ಮತ್ತು ಲಕ್ಷಾಂತರ ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದರು.
ವಿಚಾರಣೆ ವೇಳೆ ಬಂಧಿತ ಉಗ್ರರು ಸ್ಫೋಟಕ ಮಾಹಿತಿಗಳನ್ನು ಬಹಿರಂಗಗೊಳಿಸಿದ್ದು, ಸಿರಿಯಾದಲ್ಲಿರುವ ಇಸಿಸ್ ಉಗ್ರ ಸಂಘಟನೆಯ ನಾಯಕರ ಜೊತೆಗೆ ನೇರ ಸಂಪರ್ಕ ಹೊಂದಿರುವುದನ್ನು ಬಾಯಿಬಿಟ್ಟಿದ್ದಾರೆ. ಅಲ್ಲದೆ, ಹಲವು ನಗರಗಳನ್ನು ಗುರಿ ಮಾಡಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.
ದಾಳಿ ವೇಳೆ ರಾಜಕೀಯ ನಾಯಕರನ್ನು ಗುರಿಯಾಗಿಸಿಕೊಳ್ಳಲು ಸಂಚು ರೂಪಿಸಿದ್ದ ಉಗ್ರರು, ಪ್ರಮುಖವಾಗಿ ಭಾರತೀಯ ಜನತಾ ಪಕ್ಷದ ನಾಯಕರನ್ನು ಗುರಿಯಾಗಿಸಿಕೊಳ್ಳಲು ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಆದರೆ, ದಾಳಿಗೆ ಗುರಿ ಮಾಡಿಕೊಂಡಿದ್ದ ನಾಯಕರ ಹೆಸರನ್ನು ಬಹಿರಂಗ ಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ದಾಳಿಗೆ ಕಳೆದ 7 ತಿಂಗಳಿನಿಂದಲೂ ಯೋಜನೆ ರೂಪಿಸಿದ್ದ ಉಗ್ರರ ಗುಂಪು, ಗುಂಡು ದಾಳಿಯ ತರಬೇತಿಯನ್ನು ಬಂಡ್ಲಾಗುಡ ಮತ್ತು ನರ್ಸಾಪುರ್ ದಲ್ಲಿ ಪಡೆಯುತ್ತಿದ್ದರು. ಗನ್ ಗಳಲ್ಲಿ ಟೆಲಿಸ್ಕೋಪ್ ಗಳನ್ನು ಬಳಸಿ ದಾಳಿ ನಡೆಸುವ ತರಬೇತಿಗಳನ್ನು ಉಗ್ರರು ಪಡೆಯುತ್ತಿದ್ದರು. ತಮ್ಮ ದಾಳಿಗೆ ರಾಜಕೀಯ ಗಣ್ಯರು ಹಾಗೂ ದೇಗುಲಗಳನ್ನು ಗುರಿ ಮಾಡಿಕೊಂಡಿದ್ದ ಈ ಉಗ್ರರು ಇದಕ್ಕಾಗಿ ಯುವಕರನ್ನು ತಮ್ಮೊಂದಿಗೆ ಸೇರ್ಪಡೆಗೊಳಿಸಿಕೊಳ್ಳಲು ಯತ್ನ ನಡೆಸಿದ್ದರೆನ್ನಲಾಗಿದೆ.
ಬಂಧಿತರಲ್ಲಿ ಮೊಹಮ್ಮದ್ ಇಬ್ರಾಹಿಂ ಯಾಜ್ದಾನಿಗೆ ಎಂಬ ಉಗ್ರನಿಗೆ ಯುವಕರನ್ನು ಸೇರ್ಪಡೆಗೊಳಿಸುವ ಜವಾಬ್ದಾರಿಯನ್ನು ಉಗ್ರ ಸಂಘಟನೆ ನೀಡಿದ್ದು, ಇದಕ್ಕಾಗಿ ಈತ ಅಂತರ್ಜಾಲ ಕೇಂದ್ರದಲ್ಲಿ ಕಾರ್ಯಪ್ರವೃತ್ತನಾಗಿದ್ದ. ಎರಡು ನಕಲಿ ಫೇಸ್ ಬುಕ್ ಖಾತೆಗಳನ್ನು ತೆರೆದು ಇದರ ಮುಖಾಂತರ ಉಗ್ರ ಸಂಘಟನೆ ನಾಯಕರೊಂದಿಗೆ ಮಾತುಕತೆ ನಡೆಸುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಉಗ್ರರ ಶಸ್ತ್ರಾಸ್ತಗಳನ್ನು ಬಂಧಿತ ಮತ್ತೊಬ್ಬ ಉಗ್ರ ಅಬ್ದುಲ್ಲಾ ಬಿನ್ ಅಹ್ಮದ್ ಅಲ್ ಅಮೂದಿ ಅಲಿಯಾಸ್ ಫಹಾದ್ ಮನೆಯಲ್ಲಿ ವಶಕ್ಕೆ ಪಡೆಯಲಾಗಿದ್ದು, ಈತ ಹೈದರಾಬಾದ್ ನ ಚಾರ್ಮಿನಾಲ್ ಪ್ರದೇಶದ ನಿವಾಸಿಯಾಗಿದ್ದ ಎಂದು ಹೇಳಲಾಗುತ್ತಿದೆ.
Advertisement