ನವದೆಹಲಿ: ಸಿಯಾಚಿನ್ ನಲ್ಲಿ ಹಿಮಪಾತವಾಗಿ ಭಾರತೀಯ ಯೋಧರು ಸಾವನ್ನಪ್ಪಿದ ದುರ್ಘಟನೆ ಇನ್ನೂ ಹಸಿರಾಗಿರುವಾಗಲೇ ಉತ್ತರ ಭಾರತದ ಮೂರು ಕಣಿವೆ ರಾಜ್ಯಗಳಲ್ಲಿ ಹಿಮಪಾತವಾಗುವ ಕುರಿತು ಹಿಮಪಾತ ಮತ್ತು ಹಿಮಕುಸಿತ ಅಧ್ಯಯನ ಸಂಸ್ಥೆ (SASE) ಭಾನುವಾರ ಎಚ್ಚರಿಕೆ ನೀಡಿದೆ.
ಕಣಿವೆ ರಾಜ್ಯಗಳಾದ ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ರಾಜ್ಯಗಳ ಹಿಮ ಪರ್ವತ ಪ್ರದೇಶಗಳಲ್ಲಿ ಮುಂದಿನ 24 ಗಂಟೆಯೊಳಗೆ ಮಧ್ಯಮ ಪ್ರಮಾಣದ ಅಪಾಯಕಾರಿ ಹಿಮ ಕುಸಿತವಾಗಲಿದೆ ಎಂದು ಹಿಮಪಾತ ಮತ್ತು ಹಿಮಕುಸಿತ ಅಧ್ಯಯನ ಸಂಸ್ಥೆ ಎಚ್ಚರಿಕೆ ನೀಡಿದೆ. ಡಿಆರ್ ಡಿಒದ ಅಂಗ ಸಂಸ್ಥೆಯಾದ SASE ಹಿಮಪಾತ ಕುರಿತಂತೆ ಮಧ್ಯಮ ಮತ್ತು ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿದೆ.
ಪ್ರಮುಖವಾಗಿ ಜಮ್ಮು ಮತ್ತು ಕಾಶ್ಮೀರದ ಬರಾಮುಲ್ಲಾ, ಕುಪ್ವಾರ, ಬಂಡಿಪೋರ್, ಕಾರ್ಗಿಲ್, ಷೋಪಿಯಾನ್, ಅನಂತ್ ನಾಗ್, ಕುಲ್ಗಾಮ್, ರಜೌರಿ, ಡೋಡಾ ಮತ್ತು ಪೂಂಚ್ ಜಿಲ್ಲೆಗಳಲ್ಲಿ, ಹಿಮಾಚಲ ಪ್ರದೇಶದ ಲಹೌಲ್ ಮತ್ತು ಸ್ಪಿತಿ, ಕುಲ್ಲು, ಚಂಬಾ, ಕಿನೌರ್ ಜಿಲ್ಲೆಗಳಲ್ಲಿ ಮತ್ತು ಉತ್ತರಾಖಂಡದ ಚಮೌಲಿ, ಉತ್ತರಕಾಶಿ, ರುದ್ರಪ್ರಯಾಗ ಮತ್ತು ಪಿತೋರ್ ಘಡ್ ಜಿಲ್ಲೆಗಳಲ್ಲಿ ಹಿಮಪಾತವಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕಾಶ್ಮೀರದ ಪ್ರಮುಖ ಪ್ರವಾಸಿ ತಾಣಗಳಾದ ಗುಲ್ ಮೊಹರ್, ಗುಲ್ ಮಾರ್ಗ್ ಸೇರಿದಂತೆ ಫಾರ್ಕಿಯಾನ್, ಜೆಡ್-ಗಲಿ, ಕಾಂಜಲ್ವಾನ್, ಬನಿಹಾಲ್ ಟಾಪ್, ಹಡ್ಡನ್ ತಾಜ್, ನೀಲಂ ಪ್ರದೇಶಗಳಲ್ಲಿ 39 ಸೆಂ.ಮೀ ಹಿಮಪಾತವಾಗಿದ್ದು, ಮುಂದಿನ 24 ಗಂಟೆಗಳಲ್ಲಿ ಮತ್ತೆ 33 ರಿಂದ 38 ಸೆಂಮೀವರೆಗೆ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಹಿಮಾಚಲ ಪ್ರದೇಶದ ದುಂಡೀ, ಪಟ್ಸಿಯೋ ಮತ್ತು ಸೋಲಂಗ್ ನಲ ಪ್ರದೇಶದಲ್ಲಿ ಅತೀ ಹೆಚ್ಚು ಅಂದರೆ 53 ಸೆಂ. ಮೀ ಹಿಮಪಾತವಾಗಿದ್ದು, ಬಹಂಗ್ ನಲ್ಲಿ 48.1 ಮಿ.ಮೀ ಮಳೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement