ನವದೆಹಲಿ: ದೇಶದ್ರೋಹಿ ಘೋಷಣೆ ಕೂಗಿದ ಆರೋಪದಲ್ಲಿ ಜೈಲು ಸೇರಿರುವ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರ ಜಾಮೀನು ಅರ್ಜಿ ತೀರ್ಪನ್ನು ಕೋರ್ಟ್ ಮಾರ್ಚ್ 18ಕ್ಕೆ ಕಾಯ್ದಿರಿಸಿದೆ.
ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಜಾಮೀನು ಕೋರಿ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದರು. ಆದರೆ, ದೆಹಲಿ ಪೊಲೀಸರು ಉಮರ್ ಖಾಲೀದ್ ಮತ್ತು ಅನಿರ್ಬನ್ ಭಟ್ಟಾಯಾರ್ಯ ಅವರಿಗೆ ಜಾಮೀನು ನೀಡಬಾರದು ಎಂದು ದೆಹಲಿ ಹೈಕೋರ್ಟ್ ನಲ್ಲಿ ಮನವಿ ಮಾಡಿತ್ತು.
ವಿಡಿಯೋ ಫೂಟೇಜ್ ಆಧಾರದ ಮೇಲೆ ನಾವು ಆರೋಪಿಗಳ ವಿರುದ್ಧ ಕ್ರಮಕೈಗೊಂಡಿಲ್ಲ. ಈ ಆರೋಪಿಗಳ ವಿರುದ್ಧ 10 ಮಂದಿ ಸಾಕ್ಷಿಗಳಿದ್ದಾರೆ. ಹಾಗಾಗಿ, ಇಬ್ಬರು ವಿದ್ಯಾರ್ಥಿಗಳಿಗೆ ಜಾಮೀನು ನೀಡಬಾರದು ಎಂದು ಮನವಿ ಮಾಡಿತ್ತು. ಅರ್ಜಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಮಾರ್ಚ್ 18ಕ್ಕೆ ತೀರ್ಪನ್ನು ಕಾಯ್ದಿರಿಸಿದೆ.
ಜೆಎನ್ ಯುನ ಈ ಇಬ್ಬರು ವಿದ್ಯಾರ್ತಿಗಳು ಫೆಬ್ರವರಿ 23ರಂದು ಪೊಲೀಸರಿಗೆ ಶರಣಾಗಿದ್ದರು. ನಾವು ನ್ಯಾಯಾಂಗ ಬಂಧನದಲ್ಲಿದ್ದು, ಹೆಚ್ಚಿನ ವಿಚಾರಣೆಯ ಅಗತ್ಯ ಇಲ್ಲ. ಹಾಗಾಗಿ ನಮಗೆ ಜಾಮೀನು ಮಂಜೂರು ಮಾಡಬೇಕು ಎಂದು ಅರ್ಜಿದಾರರು ತಿಳಿಸಿದ್ದರು.