ಒವೈಸಿ ಹೇಳಿಕೆ ಖಂಡನೆ: ರಕ್ತದಲ್ಲಿ 'ಭಾರತ್ ಮಾತಾ ಕಿ ಜೈ' ಘೋಷ ವಾಕ್ಯ ಬರೆದ ಮುಸ್ಲಿಮರು!
ನವದೆಹಲಿ: ಕುತ್ತಿಗೆ ಮೇಲೆ ಕತ್ತಿಯಿಟ್ಟರೂ ನಾನು ಭಾರತ್ ಮಾತಾ ಕಿ ಜೈ ಹೇಳುವುದಿಲ್ಲ ಎಂದಿದ್ದ ಎಂಐಎಂ ನಾಯಕ ಅಸಾವುದ್ದೀನ್ ಒವೈಸಿ ಹೇಳಿಕೆ ವಿರುದ್ಧ ಮುಸ್ಲಿಂ ಸಮುದಾಯದವರೇ ತಿರುಗಿಬಿದ್ದಿದ್ದಾರೆ.
ಅಸಾವುದ್ದೀನ್ ಒವೈಸಿಯ ಹೇಳಿಕೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿರುವ ಮೀರತ್ ನ ಮುಸ್ಲಿಂ ನಾಯಕ ಮೊಹಮ್ಮದ್ ಇಮಾಮ್, ಒವೈಸಿ ಹೇಳಿಕೆ ದೇಶವಿರೋಧಿ ಹೇಳಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಇಮಾಮ್ ನೇತೃತ್ವದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅನೇಕ ಮುಸ್ಲಿಮರು ಭಾರತದ ಭೂಪಟದ ಮೇಲೆ ರಕ್ತದಲ್ಲಿ ಭಾರತ್ ಮಾತಾ ಕೀ ಜೈ ಎಂಬ ಘೋಷ ವಾಕ್ಯ ಬರೆದು ಒವೈಸಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಇಸ್ಲಾಂ ಧರ್ಮ ಎಂದಿಗೂ ರಾಷ್ಟ್ರ ನಿಷ್ಠೆ ವ್ಯಕ್ತಪಡಿಸುವುದಕ್ಕೆ ನಿರ್ಬಂಧ ವಿಧಿಸುವುದಿಲ್ಲ, ರಾಜಕೀಯ ಲಾಭಕ್ಕಾಗಿ ಒವೈಸಿ ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ ಎಂಬ ಹೇಳಿಕೆ ನೀಡಿದ್ದಾರೆ. ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗುವುದು ಭಾರತೀಯರಾದ ನಮ್ಮೆಲ್ಲರ ಕರ್ತವ್ಯ ಎಂದು ಮೊಹಮ್ಮದ್ ಇಮಾಮ್ ಹೇಳಿದ್ದಾರೆ.
ಭಾರತ್ ಮಾತಾ ಕಿ ಜೈ ಎನ್ನುವುದು ದೇಶಕ್ಕೆ, ದೇಶದ ಯೋಧರಿಗೆ, ಮಹಿಳೆಯರಿಗೆ, ಸಹೋದರಿಯರಿಗೆ ಸಲ್ಲಿಸುವ ಗೌರವದ ಪ್ರತೀಕ ಎಂದು ಕಾಂಗ್ರೆಸ್ ನ ಜಿಲ್ಲಾ ಉಪಾಧ್ಯಕ್ಷ ಮೊಹಮ್ಮದ್ ಇಮಾಮ್ ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ