ಕನ್ಹಯ್ಯನಂತ ಮತ್ತೊಬ್ಬ ವ್ಯಕ್ತಿ ಹುಟ್ಟದಂತೆ ಪಠ್ಯಕ್ರಮದಲ್ಲಿ ಬದಲಾವಣೆಯಾಗಬೇಕು: ವಸುದೇವ ದೇವ್ನಾನಿ
ಜೈಪುರ: ಕನ್ಹಯ್ಯನಂತರ ಮತ್ತೊಬ್ಬ ವ್ಯಕ್ತಿ ಹುಟ್ಟದಂತೆ ಮೊದಲು ಶಾಲೆ ಹಾಗೂ ವಿಶ್ವವಿದ್ಯಾಲಯಗಳ ಪಠ್ಯಕ್ರಮಗಳಲ್ಲಿ ಬದಲಾವಣೆಯನ್ನು ತರಬೇಕು ಎಂದು ರಾಜಸ್ಥಾನ ಶಿಕ್ಷಣ ಸಚಿವ ವಸುದೇವ ದೇವ್ನಾನಿ ಹೇಳಿದ್ದಾರೆ.
ಜೆಎನ್ ಯು ವಿವಾದಕ್ಕೆ ಸಂಬಂಧಿಸಿ ಮಾತನಾಡಿರುವ ಅವರು, ಕನ್ಹಯ್ಯನಂತರ ಮತ್ತೊಬ್ಬ ವ್ಯಕ್ತಿ ಹುಟ್ಟದಂತೆ ಮೊದಲು ಪಠ್ಯಕ್ರಮದಲ್ಲಿ ದೊಡ್ಡ ಬದಲಾವಣೆಯನ್ನು ತರಬೇಕಿದೆ. ಪಠ್ಯಗಳಲ್ಲಿ ದೇಶಭಕ್ತಿಯನ್ನು, ದೇಶಭಕ್ತರ ಸಾಹಸಗಾಥೆಗಳನ್ನು ಅಳವಡಿಸಬೇಕು. ಈ ಮೂಲಕ ಕನ್ಹಯ್ಯರಂತಹವರು ಮತ್ತೆಂದೂ ದೇಶದಲ್ಲಿ ಹುಟ್ಟದಂತೆ ನೋಡಿಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ದೇಶಪ್ರೇಮವನ್ನು ಬೆಳೆಸಲು ಪಠ್ಯದಲ್ಲಿ ಬದಲಾವಣೆ ತರುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.
ಹೀಗಾಗಿ ನಮ್ಮ ಸಚಿವಾಲಯ ಈ ಬಗ್ಗೆ ಕೆಲವು ನಿರ್ಧಾರಗಳನ್ನ ಕೈಗೊಂಡಿದ್ದು, ಮಕ್ಕಳು ಡಾ.ಎ.ಪಿ.ಜೆ. ಅಬ್ದುಲ್ ಕಲಾಂ, ಮಹಾರಾಣಾ ಪ್ರತಾಪ್, ಶಿವಾಜಿ ಹಾಗೂ ಪೃಥ್ವಿರಾಜ್ ಚೌಹಾಣ್ ಹಾಗೂ ದೇಶಕ್ಕಾಗಿ ಹೋರಾಟ ಮಾಡಿ ಮಡಿದ ಹೇಮು ಕಲಾನಿ, ಅಶ್ಫಾಕ್ ಉಲ್ಲಾಹ್ ಖಾನ್, ಭಗತ್ ಸಿಂಗ್, ವೀರ್ ಸಾವರ್ಕರ್, ಪಂಡಿತ್ ದೀನ್ದಾಯಲ್ ಉಪಾಧ್ಯಾಯ ಹಾಗೂ ಇನ್ನಿತರೆ ಸಾಧಕರ ಚರಿತ್ರೆಗಳನ್ನು ಪಠ್ಯದಲ್ಲಿ ಸೇರಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬಹುತೇಕ ವಿಷಗಳು ಇಂದಿಗೂ ಬ್ರಿಟೀಷರ ಕಾಲ ನಿಯಮಗಳನ್ನು ಅನುಸರಿಸುತ್ತಿದೆ. ಇದನ್ನು ಬದಲಾಯಿಸುವ ಅವಶ್ಯಕತೆಯಿದೆ. ಇದರಿಂದಾಗಿ ನಮ್ಮ ಯುವಕರು ದೇಶದ ಮೇಲಿನ ಮೌಲ್ಯ ಹಾಗೂ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಇದರ ಫಲಿತಾಂಶವೇ ಇಂದು ಜೆಎನ್ ಯು ಆವರಣದಲ್ಲಿ ಕಂಡು ಬರುತ್ತಿರುವುದು. ಇಂದು ಭಾರತ್ ಮಾತಾಕಿ ಜೈ ಎಂದು ಹೇಳುವ ಬದಲು ದೇಶ ಒಡೆಯುವ ಚಟುವಟಿಕೆಗಳು ಕಂಡು ಬರುತ್ತಿವೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ