ನವದೆಹಲಿ: ಭಯೋತ್ಪಾದನೆಯನ್ನು ಪ್ರೋತ್ಸಾಹಿಸಲು ಧರ್ಮವನ್ನು ಬಳಸುವುದನ್ನು ಅತ್ಯಂತ ದೇಶದ್ರೋಹದ ಕೆಲಸ ಎಂದು ಭಾವಿಸಬೇಕು. ಭಯೋತ್ಪಾದನೆ ಹರಡುವುದನ್ನು ಆಮೂಲಾಗ್ರವಾಗಿ ಕಿತ್ತೊಗೆಯಲು ಭಾರತ ಮತ್ತು ಪಾಕಿಸ್ತಾನ ಕ್ರಮ ವಹಿಸಬೇಕು ಎಂದು ಪಾಕಿಸ್ತಾನದ ಪ್ರಮುಖ ಪಾದ್ರಿಯೊಬ್ಬರು ಹೇಳಿದ್ದಾರೆ.
ಒಂದೂವರೆ ವರ್ಷದ ಹಿಂದೆ ಅವರ ಸಾಮೂಹಿಕ ಪ್ರತಿಭಟನೆ ನವಾಜ್ ಷರೀಫ್ ಸರ್ಕಾರವನ್ನೇ ಅಲುಗಾಡಿಸಿತ್ತು.
ಪಾಕಿಸ್ತಾನದ ಪಾದ್ರಿ ಮುಹಮ್ಮದ್ ತಹಿರ್-ಉಲ್-ಖಾದ್ರಿ ದೆಹಲಿಯಲ್ಲಿ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದರು. ಮಕ್ಕಳನ್ನು ಮತ್ತು ಯುವ ಸಮೂಹವನ್ನು ಮರುಳು ಮಾಡಿ ಧಾರ್ಮಿಕತೆ ಹೆಸರಿನಲ್ಲಿ ಶಸ್ತ್ರಾಸ್ತ್ರಗಳನ್ನು ಅವರ ಕೈಗೆ ಕೊಟ್ಟು ಕೆಟ್ಟ ಕೆಲಸ ಮಾಡಲು ಪ್ರೋತ್ಸಾಹ ನೀಡುವುದನ್ನು ತಪ್ಪಿಸಲು ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳು, ಮದರಸಾ ಮತ್ತು ಧಾರ್ಮಿಕ ಸಂಸ್ಥೆಗಳಲ್ಲಿ ಜೀವನದಲ್ಲಿ ಸರಿದಾರಿಯಲ್ಲಿ ನಡೆಯುವುದನ್ನು ಹೇಳಿಕೊಡಲು ಪಠ್ಯಕ್ರಮವನ್ನು ಜಾರಿಗೆ ತರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಧರ್ಮ ಮತ್ತು ನಂಬಿಕೆ ಹೆಸರಿನಲ್ಲಿ ಭಯೋತ್ಪಾದನೆಯನ್ನು ಪ್ರಚಾರ ಮಾಡುವುದು ಅತ್ಯಂತ ದೇಶದ್ರೋಹದ ಕೆಲಸ ಎಂದು ಪರಿಗಣಿಸಬೇಕು. ಭಾರತ ಮತ್ತು ಪಾಕಿಸ್ತಾನಗಳಿಗೆ ಭಯೋತ್ಪಾದನೆ ಪ್ರಮುಖ ಅಪಾಯವಾಗಿದ್ದು, ಭಯೋತ್ಪಾದಕರನ್ನು ಸದೆಬಡಿಯುವ ಸಮಯ ಬಂದಿದೆ ಎಂದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆ ಬಗ್ಗೆ ಮಾತನಾಡಿದ ಅವರು, ಕಳೆದ ಏಳು ದಶಕಗಳಿಂದ ಇರುವ ದ್ವೇಷವನ್ನು ಮುಂದುವರಿಸಬೇಕೆ ಅಥವಾ ಶಾಂತಿ, ಸೌಹಾರ್ದತೆ, ಆರ್ಥಿಕ ಪ್ರಗತಿ ಮತ್ತು ಅಭಿವೃದ್ಧಿಯ ಮಾರ್ಗ ಹಿಡಿಯಬೇಕೆ ಎಂಬುದನ್ನು ಎರಡೂ ರಾಷ್ಟ್ರಗಳು ನಿರ್ಧರಿಸಬೇಕು. ಭಯೋತ್ಪಾದನೆ ದೇಶದ ಅಭಿವೃದ್ಧಿಗೆ ಮಾರಕ. ಅದನ್ನು ಆಮೂಲಾಗ್ರಿವಾಗಿ ಹೊಡೆದೋಡಿಸಬೇಕು ಎಂದು ಹೇಳಿದರು.
Advertisement