ರಾಲೇಗಾಂವ್ ಸಿದ್ಧಿ: ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆಯವರು ಶುಕ್ರವಾರ ಆಸ್ಪತ್ರೆಗೆ ದಾಖಲಾಗಿರುವುದಾಗಿ ತಿಳಿದುಬಂದಿದೆ.
ಇಂದು ಬೆಳಿಗ್ಗೆ ತಮ್ಮ ಸ್ವಗ್ರಾಮ ರಾಲೇಗಾಂವ್ ಸಿದ್ಧಿಯಲ್ಲಿರುವ ನಿವಾಸದಲ್ಲಿ ಸ್ನಾನಕ್ಕೆಂದು ಹೋಗಿದ್ದ ವೇಳೆ ಅತಿಯಾದ ಆಯಾಸವಾಗುತ್ತಿದೆ ಎಂದು ಹೇಳಿದ್ದಾರೆ. ಇದರಿಂದಾಗಿ ಅಹ್ಮದ್ ನಗರದ ಖಾಸಗಿ ಆಸ್ಪತ್ರೆಗೆ ಅಣ್ಣಾ ಹಜಾರೆಯವರನ್ನು ದಾಖಲಿಸಲಾಗಿದೆ.
ವೈದ್ಯರು ತಪಾಸಣೆ ನಡೆಸಿದಾಗ ಅಣ್ಣಾ ಹಜಾರೆಯವರು ಜ್ವರದಿಂದ ನರಳುತ್ತಿದ್ದು, ಡಿಹೈಡ್ರೇಷನ್(ನಿರ್ಜಲೀಕರಣ) ಸಮಸ್ಯೆಯಿರುವುದಾಗಿ ತಿಳಿದುಬಂದಿದೆ. ಪ್ರಸ್ತುತ ವೈದ್ಯರು ಅಣ್ಣಾ ಹಜಾರೆಯವರಿಗೆ ಚಿಕಿತ್ಸೆ ನೀಡುತ್ತಿದ್ದು, ಗುಣಮುಖರಾಗುತ್ತಿದ್ದಾರೆಂದು ತಿಳಿದುಬಂದಿದೆ.
ನನಗೆ ಯಾವುದೇ ತೊಂದರೆಯಾಗಿಲ್ಲ. ಸ್ವಲ್ಪ ಆಯಾಸವಾಗಿದೆಯಷ್ಟೇ ನಾನು ಚೆನ್ನಾಗಿದ್ದೇನೆಂದು ಅಣ್ಣಾ ಹಜಾರೆ ಹೇಳಿಕೊಂಡಿದ್ದಾರೆ.
Advertisement