ಎನ್ ಐಎ ಭೇಟಿ: ಪಠಾಣ್ ಕೋಟ್ ಉಗ್ರ ದಾಳಿ ಪ್ರಕರಣದ ಸಾಕ್ಷ್ಯ ನಾಶಕ್ಕೆ ಪಾಕಿಸ್ತಾನ ಯತ್ನ?

ಪಠಾಣ್​ಕೋಟ್ ವಾಯುನೆಲೆ ಮೇಲೆ ದಾಳಿ ನಡೆದಿದ್ದ ಉಗ್ರ ದಾಳಿ ಸಂಬಂಧ ತನಿಖೆ ನಡೆಸುತ್ತಿರುವ ಎನ್ ಐಎ ಪಾಕಿಸ್ತಾನಕ್ಕೆ ಭೇಟಿ ನೀಡಲು ಮುಂದಾಗಿರುವ ಬೆನ್ನಲ್ಲೇ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ ಐ ಸಾಕ್ಷ್ಯ ನಾಶಕ್ಕೆ ಮುಂದಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಉಗ್ರ ತರಬೇತಿ ಕೇಂದ್ರ (ಸಂಗ್ರಹ ಚಿತ್ರ)
ಉಗ್ರ ತರಬೇತಿ ಕೇಂದ್ರ (ಸಂಗ್ರಹ ಚಿತ್ರ)

ನವದೆಹಲಿ: ಪಠಾಣ್​ಕೋಟ್ ವಾಯುನೆಲೆ ಮೇಲೆ ದಾಳಿ ನಡೆದಿದ್ದ ಉಗ್ರ ದಾಳಿ ಸಂಬಂಧ ತನಿಖೆ ನಡೆಸುತ್ತಿರುವ ಎನ್ ಐಎ ಪಾಕಿಸ್ತಾನಕ್ಕೆ ಭೇಟಿ ನೀಡಲು ಮುಂದಾಗಿರುವ ಬೆನ್ನಲ್ಲೇ  ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್ ಐ ಸಾಕ್ಷ್ಯ ನಾಶಕ್ಕೆ ಮುಂದಾಗಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಪಠಾಣ್ ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ್ದ ಜೈಷ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಉಗ್ರರಿಗೆ ತರಬೇತಿ ನೀಡಲಾಗುತ್ತಿದ್ದ ರಹಸ್ಯ ಸ್ಥಳವನ್ನು ಪಾಕಿಸ್ತಾನ ಗೂಡಚಾರ ಸಂಸ್ಥೆ  ಐಎಎಸ್ ಐ ದಿಢೀರ್ ಬದಲಿಸಿರುವುದು ಇಂತಹ ಶಂಕೆಗೆ ಕಾರಣವಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

ಗುಪ್ತಚರ ಇಲಾಖೆಯ ಮೂಲಗಳ ಪ್ರಕಾರ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಬಹಾವಲ್​ಪುರದ ಸಮೀಪದ ಕೋಟೆಯಲ್ಲಿದ್ದ ಉಗ್ರ ತರಬೇತಿ ಕ್ಯಾಂಪ್ ಅನ್ನು ಸ್ಥಳಾಂತರಿಸಲಾಗಿದೆ  ಎಂದು ತಿಳಿದುಬಂದಿದೆ. ಈ ಕೋಟೆಯನ್ನು 18ನೇ ಶತಮಾನದಲ್ಲಿ ಮೊಹಮ್ಮದ್ ಮಾರೂಫ್ ಖಾನ್ ಕೆಹ್ರಾನಿ ನಿರ್ಮಿಸಿದ್ದ ಮೌಜಾಗಢ್ ಕೋಟೆಯಲ್ಲಿ ಈ ವರೆಗೂ ಉಗ್ರರಿಗೆ ತರಬೇತಿ  ನೀಡಲಾಗಿತ್ತು. ಆದರೆ ಐಎಸ್ ಐ ಇದೀಗ ತುರ್ತಾಗಿ ತರಬೇತಿ ಕ್ಯಾಂಪ್ ಅನ್ನು ಸ್ಥಳಾಂತರ ಮಾಡಿದೆ. ಐಎಸ್​ಐ ಆದೇಶದಂತೆ ಸ್ಥಳವನ್ನು ತೆರವುಗೊಳಿಸಲಾಗಿದೆ ಎಂದು ಗುಪ್ತಚರ ಮೂಲಗಳು  ತಿಳಿಸಿವೆ.

ಕೋಟೆಯ ಗೋಡೆಗಳಿಗೆ ಹೊಂದಿಕೊಂಡಂತೆ ಎರಡು ಕಟ್ಟಡಗಳನ್ನು ಕಟ್ಟಲಾಗಿದ್ದು, ಪ್ರತಿಯೊಂದು ಭಾಗವೂ 750 ಚದರ ಮೀಟರ್ ವಿಸ್ತೀರ್ಣ ಹೊಂದಿವೆ. ಇಲ್ಲಿ ಉಗ್ರರು ಉಳಿದುಕೊಂಡು  ತರಬೇತಿ ಪಡೆಯಲು ಸಕಲ ವ್ಯವಸ್ಥೆ ರೂಪಿಸಲಾಗಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಇನ್ನು ಭಾರತಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನದ ತನಿಖಾಧಿಕಾರಿಗಳಿಗೆ ಸಾಕಷ್ಟು ಸಾಕ್ಷ್ಯಗಳನ್ನು  ನೀಡಿದ್ದರೂ ಪಾಕಿಸ್ತಾನ ಮಾತ್ರ ಈ ವೆರೆಗೂ ಉಗ್ರ ಮುಖಂಡ ಮಸೂದ್ ವಿರುದ್ಧ ಯಾವುದ ಕ್ರಮ ಕೈಗೊಂಡಿಲ್ಲ. ಬದಲಿಗೆ ಪಠಾಣ್ ಕೋಟ್ ದಾಳಿಯಲ್ಲಿ ಭಾಗಿಯಾಗಿದ್ದ ಜೈಷ್ ಇ ಮೊಹಮದ್  ಉಗ್ರ ಸಂಘಟನೆಯ ತರಬೇತಿ ಕ್ಯಾಂಪ್ ಅನ್ನು ಸ್ಥಳಾಂತರ ಮಾಡುವ ಮೂಲಕ ಉಗ್ರರ ರಕ್ಷಣೆಗೆ ಮುಂದಾಗಿದೆ. ಅಂತೆಯೇ ಪ್ರಕರಣ ಸಂಬಂಧ ಸಾಕ್ಷ್ಯನಾಶಕ್ಕೂ ಪಾಕಿಸ್ತಾನ ಯತ್ನಿಸುತ್ತಿದೆ  ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com