ನವದೆಹಲಿ: ಮಹಾರಾಷ್ಟ್ರದ ಬರಪೀಡಿತ ಪ್ರದೇಶ ಲಾತೂರ್ ರೈಲು ಮೂಲಕ ನೀರು ಪೂರೈಸಿದ್ದಕ್ಕಾಗಿ ನೀಡಿದ್ದ 4 ಕೋಟಿ ಬಿಲ್ ನ್ನು ರೈಲ್ವೆ ಇಲಾಖೆ ವಾಪಸ್ ಪಡೆದಿದೆ.
ಲಾತೂರ್ ಜಿಲ್ಲಾಧಿಕಾರಿಗೆ ನೀಡಲಾಗಿದ್ದ 4 ಕೋಟಿ ಬಿಲ್ ನ್ನು ರೈಲ್ವೆ ಸಚಿವ ಸುರೇಶ್ ಪ್ರಭು ವಾಪಸ್ ಪಡೆದಿದ್ದು ಬಿಲ್ ಕಳಿಸಿದ್ದಕ್ಕೂ ಸ್ಪಷ್ಟನೆ ನೀಡಿದ್ದಾರೆ. ಲಾತೂರ್ ಗೆ ರೈಲು ಬೋಗಿಗಳ ಮೂಲಕ ನೀರು ಪೂರೈಕೆ ಮಾಡಿದ್ದಕ್ಕೆ ಖರ್ಚಾದ ಹಣದ ಬಗ್ಗೆ ಲಾತೂರ್ ನ ನಿಲ್ಲಾಡಳಿತ ಮಾಹಿತಿ ಕೇಳಿದ್ದ ಹಿನ್ನೆಲೆಯಲ್ಲಿ 4 ಕೋಟಿ ಖರ್ಚಾಗಿದೆ ಎಂದು ಹೇಳಲಾಗಿತ್ತು ಎಂಬ ಸ್ಪಷ್ಟನೆ ಬಂದಿದೆ.
ರೈಲು ಮೂಲಕ ನೀರು ಪೂರೈಕೆ ಮಾಡಿರುವುದಕ್ಕೆ ಖರ್ಚಾದ ಹಣದ ಪಾವತಿ ವಿಷಯ ಈಗ ಪ್ರಸ್ತುತವಲ್ಲ, ಬರ ಪೀಡಿತ ಪ್ರದೇಶದ ಜನತೆಗೆ ನಿರಂತರ ನೀರು ಪೂರೈಕೆಯೇ ನಮ್ಮ ಉದ್ದೇಶ ಎಂದು ರೈಲ್ವೇ ಇಲಾಖೆ ಹೇಳಿದೆ. ಈ ಕಾರ್ಯಾಚರಣೆಯನ್ನು ಖುದ್ದು ಪರಿಶೀಲನೆ ನಡೆಸುತ್ತಿರುವ ರೈಲ್ವೆ ಸಚಿವರು ನೀರು ಪೂರೈಕೆಯನ್ನು ಮುಂದುವರೆಸುವಂತೆ ಸೂಚನೆ ನೀಡಿದ್ದಾರೆ.
ನೀರಿಗಾಗಿ ಹಾಹಾಕಾರ ಉಂಟಾಗಿದ್ದ ಹಿನ್ನೆಲೆಯಲ್ಲಿ ಕಳೆದ ತಿಂಗಳು ರೈಲು ಮೂಲಕ ಲಾತೂರ್ ಗೆ 6 .20 ಕೋಟಿ ನೀರು ಪೂರೈಕೆ ಮಾಡಲಾಗಿತ್ತು. ಈಗ ಇದಕ್ಕೆ 4 ಕೋಟಿ ರೂಪಾಯಿ ಬಿಲ್ ಕಳಿಸಿಕೊಟ್ಟಿದ್ದ ರೈಲ್ವೆ ಇಲಾಖೆ ವ್ಯವಸ್ಥಾಪಕ ಎಸ್ ಕೆ ಸೂದ್, ಆಡಳಿತ ವಿಭಾಗದ ಮನವಿಯ ಹಿನ್ನೆಲೆಯಲ್ಲಿ ಲಾತೂರ್ ನ ಜಿಲ್ಲಾಧಿಕಾರಿಗೆ ಬಿಲ್ ಕಳಿಸಿದ್ದೇವೆ. ಬಿಲ್ ಪಾವತಿ ಮಾಡುವುದು ಅಥವಾ ಅದನ್ನು ಮನ್ನಾಗೊಳಿಸುವಂತೆ ಮನವಿ ಮಾಡುವುದು ಜಿಲ್ಲಾಡಳಿತದ ವಿವೇಚನೆಗೆ ಬಿಟ್ಟ ವಿಷಯ ಎಂದಿದ್ದರು.
Advertisement