ಜಾರ್ಖಂಡ್/ಬಿಹಾರ: 24 ಗಂಟೆಯೊಳಗೆ ಇಬ್ಬರು ಪತ್ರಕರ್ತರನ್ನು ಹತ್ಯೆ ಮಾಡಿರುವ ಘಟನೆ ಬಿಹಾರ ಮತ್ತು ಜಾರ್ಖಂಡ್ ನಲ್ಲಿ ನಡೆದಿದೆ.
ಅಪರಿಚಿತ ಬಂದೂಕುಧಾರಿಗಳು ಬಿಹಾರದಲ್ಲಿ ಹಿರಿಯ ಪತ್ರಕರ್ತ ಮತ್ತು ಜಾರ್ಖಂಡ್ ನಲ್ಲಿ ಸುದ್ದಿ ವಾಹಿನಿಯ ವರದಿಗಾರನನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ಸಿವಾನ್ ಜಿಲ್ಲೆಯ ಹಿಂದೂಸ್ತಾನ್ ಹಿಂದಿ ದೈನಿಕದ ಜಿಲ್ಲಾ ಮುಖ್ಯಸ್ಥ ರಾಜ್ ದೇವ್ ರಂಜನ್(45) ಮತ್ತು ಸುದ್ದಿವಾಹಿನಿಯ ವರದಿಗಾರ ಅಖಿಲೇಶ್ ಪ್ರತಾಪ್(35) ಗುಂಡೇಟಿಗೆ ಬಲಿಯಾದ ಪತ್ರಕರ್ತರು.
ರಾಜ್ ದೇವ್ ರಂಜನ್ ಅವರು ಹಣ್ಣಿನ ಮಾರುಕಟ್ಟೆ ಬಳಿ ಹೋಗುತ್ತಿದ್ದಾಗ ಅವರ ಮೇಲೆ ಅಪರಿಚಿತ ಬಂದೂಕುಧಾರಿಗಳು ಗುಂಡಹಾರಿಸಿದ್ದಾರೆ. ಗಾಯಗೊಂಡ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲಿ ಮೃತಪಟ್ಟಿದ್ದಾರೆ.
ಇಬ್ಬರು ಪತ್ರಕರ್ತರ ಹತ್ಯೆ ಬಗ್ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್ ರಾಜ್ಯದ ಛಾತ್ರಾ ಜಿಲ್ಲೆಯ ದೇವಾರಿಯಾ ಗ್ರಾಮದ ಪಂಚಾಯಿತಿ ಕಚೇರಿ ಬಳಿ ಸುದ್ದಿವಾಹಿನಿಯ ವರದಿಗಾರ ಅಖಿಲೇಶ್ ಪ್ರತಾಪ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆ ದೇವಾರಿಯಲ್ಲಿ ಬಂದ್ ಆಚರಿಸಲಾಯಿತು.