ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯೋಧರ ರಕ್ತದೊಂದಿಗೆ ದಲ್ಲಾಳಿ ಕೆಲಸ ಮಾಡುತ್ತಿದ್ದಾರೆಂದು ಹೇಳಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ವಿರುದ್ಧ ಪ್ರಕರಣವೊಂದು ದಾಖಲಾಗಿರುವುದಾಗಿ ಶನಿವಾರ ತಿಳಿದುಬಂದಿದೆ.
ಮೋದಿಯವರು ಯೋಧರ ರಕ್ತದ ಹಿಂದೆ ಅಡಗಿ ಕುಳಿತಿದ್ದಾರೆಂಬ ರಾಹುಲ್ ಗಾಂಧಿಯವರ ಹೇಳಿಕೆ ವಿರುದ್ಧ ಚಂದೌಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದಾಗಿ ಹೇಳಲಾಗುತ್ತಿದೆ.
ಈ ಹಿಂದೆ ಉತ್ತರ ಪ್ರದೇಶದಲ್ಲಿ ನಡೆಸಲಾಗಿದ್ದ ಕಿಸಾನ್ ಯಾತ್ರೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿಯವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಸೈನಿಕರ ರಕ್ತದ ಹಿಂದೆ ಅಡಗಿ ಕುಳಿತಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಸೀಮಿತ ದಾಳಿ ನಡೆಸಿದ್ದ ಭಾರತೀಯ ಯೋಧರ ರಕ್ತದೊಂದಿಗೆ 'ದಲ್ಲಾಳಿ' ಕೆಲ್ಸಾ ಮಾಡುತ್ತಿದ್ದಾರೆ. ಸೀಮಿತ ದಾಳಿ ನಡೆಸಿರುವ ನಮ್ಮ ಸೈನಿಕರು ರಕ್ತ ನೀಡಿದ್ದಾರೆ, ಆದರೆ, ಮೋದಿಯವರು ಸೈನಿಕರ ರಕ್ತದ ಹಿಂದೆ ಅಡಗಿ ಕುಳಿತಿದ್ದಾರೆ. ಮೋದಿ ಅವರು ಒಡಕುಂಟು ಮಾಡುವ ನಾಯಕ ಎಂದು ಆರೋಪಿಸಿದ್ದರು.
ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ ಶಾ ಅವರು, ಮೋದಿ ರಕ್ತದ ದಲ್ಲಾಳಿ ಎಂದು ಹೇಳಿಕೆ ನೀಡುವ ಮುಖಾಂತರ ರಾಹುಲ್ ಗಾಂಧಿಯವರು ಎಲ್ಲಾ ರೀತಿಯ ಮಿತಿಯನ್ನೂ ಮೀರಿದ್ದಾರೆ. ರಾಹುಲ್ ಅವರ ಹೇಳಿಕೆಯಿಂದ ಸೇನೆಗೆ ಅವಮಾನವಾಗಿದೆ ಎಂದು ಹೇಳಿದ್ದರು.
Advertisement