ಡೆಹ್ರಾಡೂನ್: ರಿಷಿಕೇಶದಿಂದ ಶ್ರೀನಗರಕ್ಕೆ ತೆರಳುತ್ತಿದ್ದ ಕಾರೊಂದು ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಪೊಲೀಸರು ಸೇರಿದಂತೆ 4 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರಾಖಂಡದಲ್ಲಿ ಭಾನುವಾರ ನಡೆದಿದೆ.
ಉತ್ತರಾಖಂಡದ ಟೆಹ್ರೀ ಜಿಲ್ಲೆಯ ದೇವ ಪ್ರಯಾಗದ ಸಮೀಪವಿರುವ ಟೋಟಘಾಟಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದ್ದು, ಅಪಘಾತಕ್ಕೆ ಚಾಲಕನ ಅಜಾಗರೂಕತೆಯೇ ಕಾರಣ ಎಂದು ಹೇಳಲಾಗುತ್ತಿದೆ. ಅಪಾಯಕಾರಿ ತಿರುವನ್ನು ಗಮನಿಸಿದಯೇ ಚಾಲಕ ಸಾಮಾನ್ಯದಂತೆಯೇ ಕಾರು ಚಾಲನೆ ಮಾಡಿದ್ದರಿಂದ ಕಾರು ಪ್ರಪಾತಕ್ಕೆ ಉರುಳಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸುಮಾರು 500 ಅಡಿಗೂ ಅಧಿಕ ಆಳವಿರುವ ಪ್ರಪಾತಕ್ಕೆ ಕಾರು ಉರುಳಿದೆ.
ಘಟನಾ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ದೌಡಾಯಿಸಿದ್ದು, ಶವಗಳನ್ನು ಮೇಲಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದ್ದು, ಕಾರ್ಯಾಚರಣೆಗೆ ಕ್ರೇನ್ ಅನ್ನು ಬಳಿಸಿಕೊಳ್ಳಲಾಗುತ್ತಿದೆ.
Advertisement