ನವದೆಹಲಿ: ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದ್ದು, ಕದನ ವಿರಾಮ ಉಲ್ಲಂಘನೆ ಸಮಸ್ಯೆಗೆ ಅಂತಿಮ ಪರಿಹಾರವನ್ನು ಹುಡುಕಿ ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಶನಿವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರು, ಮಾಡಬೇಕಿದ್ದನ್ನೇ ಇಂದು ನಮ್ಮ ಭಾರತೀಯ ಯೋಧರು ಮಾಡಿದ್ದಾರೆ. ತಮ್ಮ ಕರ್ತವ್ಯದಂತೆಯೇ ಯೋಧರು ಸರಿಯಾದ ಕೆಲಸವನ್ನೇ ಮಾಡಿದ್ದಾರೆ. ಆದರೆ, ಗಡಿಯಲ್ಲಿ ಪಾಕಿಸ್ತಾನ ಸೇನೆ ಪದೇ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಲೇ ಇದೆ. ಗಡಿ ನುಸುಳಲು ಅಪ್ರಚೋದಿತ ಗುಂಡಿನ ದಾಳಿನ್ನು ನಡೆಸುತ್ತಿದೆ. ಇಂತಹ ಸಮಯದಲ್ಲಿ ಕದನ ವಿರಾಮ ಉಲ್ಲಂಘನೆ ಸಮಸ್ಯೆಗೆ ಅಂತಿರ ಪರಿಹಾರವನ್ನು ಕಂಡು ಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಇಷ್ಟು ಮಂದಿ ಹತ್ಯೆಯಾಗಿದ್ದಾರೆಂದು ಹೇಗೆ ಲೆಕ್ಕ ಹಾಕುತ್ತಾರೋ ಗೊತ್ತಿಲ್ಲ. ಆದರೆ, ಸೇನೆಗೆ ತನ್ನದೇ ಆದಂತಹ ಲೆಕ್ಕಾಚಾರ ಹಾಗೂ ವಿಧಾನಗಳಿರುತ್ತವೆ. ಇದರಂತೆಯೇ ಭಾರತೀಯ ಯೋಧರು ಕಾರ್ಯನಿರ್ವಹಿಸುತ್ತಾರೆ. ಭಾರತೀಯ ಸೇನೆ ನಮಗೆ ನಂಬಿಕೆಯಿದೆ. ಭಾರತೀಯ ಸೇನೆ ನೀಡಿರುವ ಮಾಹಿತಿಯಂತೆಯೇ ಪಾಕಿಸ್ತಾನದ ಕಡೆಯಿಂದಲೂ ಮಾಹಿತಿಗಳು ಬರುತ್ತಿವೆ. ಪಾಕಿಸ್ತಾನ ಚಾನೆಲ್ ಗಳಲ್ಲಿಯೂ ಯೋಧರು ನೀಡಿರುವ ಮಾಹಿತಿಗಳೇ ಬರುತ್ತಿವೆ. ಪಾಕಿಸ್ತಾನ ಸೈನಿಕರು ಹತ್ಯೆಯಾಗಿರುವುದು ಇದರಿಂದ ಖಚಿತವಾಗುತ್ತವೆ ಎಂದು ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಹೀರಾ ನಗರದ ಗಡಿ ಬಳಿ ಪಾಕಿಸ್ತಾನ ಸೇನೆ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿತ್ತು. ಪಾಕಿಸ್ತಾನ ಸೈನಿಕರ ದಾಳಿಗೆ ಭಾರತೀಯ ಸೇನೆ ದಿಟ್ಟ ಉತ್ತರ ನೀಡುವ ಮೂಲಕ ಗಡಿ ನುಸುಳಲು ಯತ್ನಿಸುತ್ತಿದ್ದ ಓರ್ವ ಉಗ್ರ ಸೇರಿದಂತೆ 7 ಮಂದಿ ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿತ್ತು.
Advertisement