ನವದೆಹಲಿ: ಉಗ್ರ ಬುರ್ಹಾನ್ ವಾನಿ ಹತ್ಯೆ ಖಂಡಿಸಿ ಹಲವು ದಿನಗಳಿಂದಲೂ ಕಾಶ್ಮೀರದಲ್ಲಿ ಉಂಟಾಗಿರುವ ಹಿಂಸಾಚಾರ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ನೇತೃತ್ವದಲ್ಲಿ ಬುಧವಾರ ಸರ್ವಪಕ್ಷ ಸಭೆ ನಡೆಯಲಿದೆ.
ಕಾಶ್ಮೀರ ವಿವಾದ ಕುರಿತಂತೆ ನಿನ್ನೆ ಕೂಡ ಗೃಹ ಸಚಿವ ರಾಜನಾಥ್ ಸಿಂಗ್ ಅವರು ನಿರ್ಣಾಯಕ ಸಭೆಯೊಂದನ್ನು ರಾಜಧಾನಿ ದೆಹಲಿಯಲ್ಲಿ ನಡೆಸಿದ್ದರು. ಇದರಂತೆ ಇಂದೂ ಕೂಡ ಹಿಂಸಾಚಾರ ಕುರಿತಂತೆ ದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆಂದು ತಿಳಿದುಬಂದಿದೆ.
ರಾಜನಾಥ ಸಿಂಗ್ ನೇತೃತ್ವದಲ್ಲಿ ನಡೆಯಲಿರುವ ಈ ಸಭೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಪ್ರಧಾನಿ ಸಚಿವಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹಾಗೂ ಇನ್ನಿತರೆ ನಾಯಕರು ಹಾಜರಾಗಲಿದ್ದಾರೆ.
ಸರ್ವ ಪಕ್ಷ ಸಭೆ ಕುರಿತಂತೆ ಮಾತನಾಡಿರುವ ರಾಮ್ ಮಾಧವ್ ಅವರು, ಕಾಶ್ಮೀರ ವಿವಾದ ಕುರಿತಂತೆ ಸರ್ವ ಪಕ್ಷ ಸಭೆ ಕರೆಯಲಾಗಿದೆ. ಸಭೆ ವೇಳೆ ಕಾಶ್ಮೀರ ಪರಿಸ್ಥಿತಿ ಕುರಿತಂತೆ ಮಾತುಕತೆ ನಡೆಸಲಾಗುತ್ತದೆ ಹಾಗೂ ಮುಂದಿನ ನಿರ್ಧಾರಗಳ ಕುರಿತಂತೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ಕಾಶ್ಮೀರ ವಿವಾದ ಕುರಿತಂತೆ ಕೆಲ ದಿನಗಳ ಹಿಂದಷ್ಟೇ ರಾಜನಾಥ್ ಸಿಂಗ್ ನೇತೃದಲ್ಲಿ ಕಾಶ್ಮೀರದಲ್ಲಿ ಸರ್ವಪಕ್ಷ ಸಭೆಯೊಂದು ನಡೆದಿತ್ತು. ಎರಡು ದಿನಗಳ ಕಾಲ ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವರು ಪರಿಸ್ಥಿತಿಯನ್ನು ಅವಲೋಕಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ವಿಯೆಟ್ನಾಂ ಹಾಗೂ ಚೀನಾ ಪ್ರವಾಸ ಮುಗಿಸಿ ಸೋಮವಾರ ಸಂಜೆಯಷ್ಟೇ ದೆಹಲಿಗೆ ಬಂದಿದ್ದರು. ಇದರಂತೆ ನಿನ್ನೆ ರಾಜನಾಥ್ ಸಿಂಗ್ ಅವರು ಕಾಶ್ಮೀರ ಪರಿಸ್ಥಿತಿ ಕುರಿತಂತೆ ಪ್ರಧಾನಿಯವರಿಗೆ ವರದಿ ಸಲ್ಲಿಸಿದ್ದರು.
Advertisement