ವೈಶಾಲಿ: ಗಂಗಾ ನದಿ ತಟದಲ್ಲಿ ಅನಾಥವಾಗಿ ಬಿದ್ದಿದ್ದ ಶವವೊಂದರ ಕುತ್ತಿಗೆಗೆ ಹಗ್ಗ ಹಾಕಿದ ಪೊಲೀಸರು ಸುಮಾರು ಮೀಟರ್ ದೂರದವರೆಗೂ ಎಳೆದೊಯ್ದ ಅಮಾನುಷ ಘಟನೆ ಬಿಹಾರದಲ್ಲಿ ನಡೆದಿದೆ.
ಮೂಲಗಳ ಪ್ರಕಾರ ಬಿಹಾರದಲ್ಲಿರುವ ವೈಶಾಲಿ ಜಿಲ್ಲೆಯ ಗಂಗಾನದಿ ತಟದಲ್ಲಿ ಅನಾಥ ಶವವೊಂದು ಬಿದ್ದಿತ್ತು. ಇದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಕೂಡಲೇ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ಕರೆ ಮಾಡಿ ಸುಮಾರು 2 ತಾಸಿನ ಬಳಿಕ ಘಟನಾಸ್ಥಳಕ್ಕೆ ಬಂದ ಪೊಲೀಸರು ಸ್ಥಳ ಮಹಜರು ಮಾಡಿ ಆ್ಯಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಕರೆಮಾಡಿ ಸುಮಾರು ತಾಸುಗಳೇ ಕಳೆದರೂ ಆಸ್ಪತ್ರೆ ವಾಹನ ಬಾರದ ಕಾರಣ ಪೊಲೀಸರೇ ಹಗ್ಗ ತಂದು ಹೆಣದ ಕುತ್ತಿಗೆಗೆ ಹಗ್ಗ ಬಿಗಿದಿದ್ದಾರೆ.
ಬಳಿಕ ಸುಮಾರು ದೂರಗಳವರೆಗೂ ಹೆಣವನ್ನು ಎಳೆದುಕೊಂಡು ಹೋಗಿದ್ದು, ಪೊಲೀಸರ ಕ್ರಮವನ್ನು ಗ್ರಾಮಸ್ಥರು ಪ್ರಶ್ನಿಸಿದರಾದರೂ ಪೊಲೀಸರು ಎಂಬ ಭಯಕ್ಕೆ ಯಾರೂ ಇದನ್ನು ಗಟ್ಟಿಯಾಗಿ ಪ್ರಶ್ನಿಸಿಲ್ಲ. ನದಿ ದಡದಿಂದ ಹಿಡಿದು ಪೊಲೀಸರ ಕಾರು ನಿಂತಿದ್ದ ಪ್ರದೇಶದ ವರೆಗೂ ಹೆಣದ ಕುತ್ತಿಗೆ ಹಗ್ಗ ಕಟ್ಟಿ ಪೊಲೀಸರು ಎಳೆದೊಯ್ದಿದ್ದಾರೆ.
ಈ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಬಿಹಾರ ಪೊಲೀಸ್ ವರಿಷ್ಠಾಧಿಕಾರಿಗಳ ವರೆಗೂ ಸುದ್ದಿ ಮುಟ್ಟಿದೆ. ಕೂಡಲೇ ಎಚ್ಚೆತ್ತ ಅಧಿಕಾರಿಗಳು ಹೆಣದ ಕುತ್ತಿಗೆಗೆ ಹಗ್ಗ ಬಿಗಿದು ಎಳೆದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಿದ್ದಾರೆ.
ಇದೇ ಬಿಹಾರದಲ್ಲಿ ಇತ್ತೀಚೆಗಷ್ಟೇ ಗಲಭೆ ಪ್ರಕರಣವೊಂದರಲ್ಲಿ ಸಾವಿಗೀಡಾಗಿದ್ದ 10 ಮಂದಿಯ ಶವಗಳನ್ನು ನದಿಗೆಸೆದು, ಅಂತ್ಯಕ್ರಿಯೆ ನಡೆಸಿರುವುದಾಗಿ ಸುಳ್ಳು ಹೇಳಿದ್ದರು. ಬಳಿಕ ಈ ಪ್ರಕರಣ ಬೆಳಕಿಗೆ ಬಂದು ಪೊಲೀಸರನ್ನು ಬಿಹಾರ ಸರ್ಕಾರ ಅಮಾನತುಗೊಳಿಸಿತ್ತು.
Advertisement