ಟೆಕಿ ಸ್ವಾತಿ ಕೊಲೆ ಆರೋಪಿ ರಾಮ್ ಕುಮಾರ್ ಆತ್ಮಹತ್ಯೆಗೆ ಶರಣು
ಚೆನ್ನೈ: ಇನ್ಫೋಸಿಸ್ ಸಂಸ್ಥೆಯ ಟೆಕಿ ಸ್ವಾತಿ ಅವರನ್ನು ಹಾಡಹಗಲೇ ರೈಲು ನಿಲ್ದಾಣದಲ್ಲಿ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರೋಪದ ಮೇರೆಗೆ ಬಂಧಿತನಾಗಿದ್ದ ರಾಮ್ ಕುಮಾರ್ ಜೈಲಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಾತಿ ಕೊಲೆ ಪ್ರಕರಣ ಸಂಬಂಧ ಬಂಧಿತನಾಗಿ ಚೆನ್ನೈ ಹೊರವಲಯದಲ್ಲಿರುವ ಪುಳಲ್ ಜೈಲಿನಲ್ಲಿ ಬಂಧಿಯಾಗಿದ್ದ ರಾಮ್ ಕುಮಾರ್ ಇಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ. ಜೈಲಲ್ಲಿದ್ದ ವಿದ್ಯುತ್ ತಂತಿಯನ್ನು ಬಾಯಲ್ಲಿ ಕಚ್ಚಿದ ರಾಮ್ ಕುಮಾರ್ ಬಳಿಕ ಅದನ್ನು ತನ್ನ ಕುತ್ತಿಗೆಗೆ ಬಲವಾಗಿ ಸುತ್ತಿಕೊಂಡಿದ್ದಾನೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾನೆ. ಇದನ್ನು ಕಂಡ ಜೈಲು ಸಿಬ್ಬಂದಿಗಳು ಕೂಡಲೇ ಆತನನ್ನು ರೋಯಾಪೇಟಾ ಸರ್ಕಾರಿ ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಾಗಲೇ ರಾಮ್ ಕುಮಾರ್ ಅಸುನೀಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ತಿಳಿಸಿರುವಂತೆ ಜೈಲಲ್ಲಿ ಯಾರೂ ಇಲ್ಲದೇ ವೇಳೆ ರಾಮ್ ಕುಮಾರ್ ಜೈಲು ಗೋಡೆಯನ್ನು ಏರಿ ಅಲ್ಲಿದ್ದ ವಿದ್ಯುತ್ ತಂತಿಯನ್ನು ಹಿಡಿದಿದ್ದಾನೆ. ಬಳಿಕ ಅದನ್ನು ಬಾಯಲ್ಲೇ ಕಚ್ಚಲು ಆತ ಆರಂಭಿಸಿದ್ದು, ಇದನ್ನು ಕಂಡ ಸಿಬ್ಬಂದಿ ಕೂಡಲೇ ವಿದ್ಯುತ್ ಸಂಚಾರ ಸ್ಥಗಿತಗೊಳಿಸಿದ್ದಾರೆ. ಆದರೆ ಅಷ್ಟಕ್ಕೇ ಸುಮ್ಮನಾಗದ ರಾಮ್ ಕುಮಾರ್ ಬಳಿಕ ಅದೇ ವೈರ್ ಅನ್ನು ತನ್ನ ಕುತ್ತಿಗೆಗೆ ಬಲವಾಗಿ ಸುತ್ತಿಕೊಂಡಿದ್ದಾನೆ. ಇದರಿಂದ ಆತ ಉಸಿರಾಟವಾಡದೇ ಗಂಭೀರ ಸ್ಥಿತಿ ತಲುಪಿದ್ದು, ಬಳಿಕ ಆತನನ್ನು ಪೊಲೀಸರು ಆಸ್ಪತ್ರೆಗೆ ಸಾಗಿಸಲು ಯತ್ನಿಸಿದ್ದಾರೆ.
ಪೊಲೀಸ್ ವಾಹನದ ಮೂಲಕ ರಾಮ್ ಕುಮಾರ್ ನನ್ನು ಸಮೀಪ ರೋಯಾಪೇಟಾ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ರಾಮ್ ಕುಮಾರ್ ಸಾವನ್ನಪ್ಪಿದ್ದು, ಸಂಜೆ ಸುಮಾರು 5.40ರವೇಳೆಯಲ್ಲಿ ಆಸ್ಪತ್ರೆ ವೈದ್ಯರು ಆತನ ಸಾವನ್ನು ಖಚಿತಪಡಿಸಿದ್ದಾರೆ.
ತನ್ನ ಪ್ರೀತಿಯನ್ನು ನಿರಾಕರಿಸಿದಳು ಎಂಬ ಕಾರಣಕ್ಕಾಗಿ ಭಗ್ನ ಪ್ರೇಮಿ ರಾಮ್ ಕುಮಾರ್ ಚೆನ್ನೈನ ನುಂಗಂಬಾಕ್ಕಮ್ ರೈಲ್ವೇ ನಿಲ್ದಾಣದಲ್ಲಿ ಸ್ವಾತಿಯನ್ನು ಭೀಕರವಾಗಿ ಕೊಚ್ಚಿ ಕೊಂದಿದ್ದ. ಬಳಿಕ ಪೊಲೀಸರ ತೀವ್ರ ತಪಾಸಣೆ ಬಳಿಕ ರಾಮ್ ಕುಮಾರ್ ನನ್ನು ಆತನ ಸ್ವಗ್ರಾಮ ತಿರುನಲ್ವೇಲಿಯಲ್ಲಿ ಬಂಧಿಸಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ