ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ: ಪ್ರಧಾನಿ ಮೋದಿ

ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ (ಸಂಗ್ರಹ ಚಿತ್ರ)
Updated on

ನವದೆಹಲಿ: ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸೋಮವಾರ ಹೇಳಿದ್ದಾರೆ.

ಪಾಕಿಸ್ತಾನ ಜೊತೆಗಿನ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದಿಂದ ಹಿಂದೆ ಸರಿಯಲು ಸಾಧ್ಯವೇ ಎಂಬುದರ ಕುರಿತಂತೆ ಉನ್ನತಾಧಿಕಾರಿಗಳ ಜೊತೆ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಭೆ ನಡೆಸಿದ್ದು, ಇದೀಗ ಸಭೆ ಅಂತಿಮಗೊಂಡಿದೆ.

ಸಭೆ ವೇಳೆ ಒಪ್ಪಂದದ ಒಳಿತು ಹಾಗೂ ಕೆಡುಕುಗಳ ಬಗ್ಗೆ ವಿದೇಶಾಂಗ ಸೇರಿ ಹಲವು ಸಚಿವಾಲಯಗಳ ಉನ್ನತಾಧಿಕಾರಿಗಳ ಜತೆ ಚರ್ಚೆ ನಡೆಸಿರುವ ಮೋದಿಯವರು, ಅಂತಿಮವಾಗಿ ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆಂದು ಮೂಲಗಳಿಂದ ತಿಳಿದುಬಂದಿದೆ.

ಉರಿ ಸೆಕ್ಟರ್ ನ ಸೇನಾ ಪ್ರಧಾನ ಕಚೇರಿ ಮೇಲಿನ ಉಗ್ರ ದಾಳಿ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲು ಕೇಂದ್ರ ಸರ್ಕಾರ ಈ ರೀತಿಯ ನಿರ್ಧಾರವನ್ನು ಕೈಗೊಂಡಿದೆ ಎಂದು ಹೇಳಲಾಗುತ್ತಿದೆ.  

ಸಿಂಧೂ ನದಿ ನೀರು ಹಂಚಿಕೆ ಕುರಿತಂತೆ ಭಾರತ ಹಾಗೂ ಪಾಕಿಸ್ತಾನ ದೇಶಗಳ ಮಧ್ಯೆ 1960ರಲ್ಲಿ ಒಪ್ಪಂದವಾಗಿತ್ತು. ಒಪ್ಪಂದಕ್ಕೆ ಅಂದಿನ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರು ಹಾಗೂ ಪಾಕಿಸ್ತಾನ ಪ್ರಧಾನಮಂತ್ರಿ ಅಯುಬ್ ಖಾನ್ ಅವರು ಸಹಿ ಮಾಡಿದ್ದರು.

ಸಿಂಧೂವಿನ ಪ್ರಮುಖ ಉಪನದಿಗಳು ಭಾರತದಲ್ಲಿ ಹರಿಯುವುದರಿಂದ ಒಪ್ಪಂದ ಉಲ್ಲಂಘನೆ ಮಾಡಿದ್ದೇ ಆದರೆ, ಪಾಕಿಸ್ತಾನಕ್ಕೆ ನೀರು ಹರಿಸವುದನ್ನು ನಿಲ್ಲಿಸಲಾಗುತ್ತದೆ ಎಂಬ ಮಾತುಗಳು ಕೇಳಿಬಂದಿದ್ದವು. ಸಿಂಧೂ ನದಿ ಪಾಕಿಸ್ತಾನಕ್ಕೆ ಜೀವನದಿಯಾಗಿದ್ದು, ಭಾರತ ನೀರು ಹರಿಸುವುದನ್ನು ನಿಲ್ಲಿಸದರೆ ಭಯೋತ್ಪಾದನೆಯನ್ನು ಪ್ರಚೋದಿಸುತ್ತಿರುವ ಪಾಕಿಸ್ತಾನಕ್ಕೆ ಸಂಕಷ್ಟ ಎದುರಾಗಿಲಿದೆ ಎಂದು ಹೇಳಲಾಗುತ್ತಿತ್ತು.

ಇದರ ನಡುವೆಯೂ ಕೆಲ ದಿನಗಳ ಹಿಂದೆ ಇಂತಹ ಒಪ್ಪಂದಗಳು ಎರಡೂ ರಾಷ್ಟ್ರಗಳ ನಂಬಿಕೆ ಹಾಗೂ ಸಹಕಾರದ ಮೇಲೆ ನಿಂತಿದೆ ಎಂಬ ಮಾತುಗಳು ಸರ್ಕಾರದ ಕಡೆಯಿಂದ ಕೇಳಿಬಂದಿತ್ತು. ಈ ಹಿಂದೆ ಸಿಂಧೂ ಉಪನದಿಗಳಲ್ಲಿ ಹಲವು ಯೋಜನೆಗಳನ್ನು ಭಾರತ ಕೈಗೆತ್ತಿಕೊಂಡಿದ್ದು, ಪಾಕಿಸ್ತಾನಕ್ಕೆ ನೀರು ಹರಿಸುತ್ತಿಲ್ಲ ಎಂದು ಪಾಕಿಸ್ತಾನ ಭಾರತದ ವಿರುದ್ಧ ಅಂತರರಾಷ್ಟ್ರೀಯ ನ್ಯಾಯಾಧಿಕರಣದಲ್ಲಿ ಪ್ರಕರಣವನ್ನೂ ದಾಖಲು ಮಾಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com