ನವದೆಹಲಿ: ಪಾಕಿಸ್ತಾನದ ನಿರಂತರ ಭಯೋತ್ಪಾದಕ ದಾಳಿಗೆ ಪರೋಕ್ಷವಾಗಿ ತಿರುಗ್ತು ನೀಡಲು ಭಾರತ ಸರ್ಕಾರ ಇಂಡಸ್ ನೀರು ಒಪ್ಪಂದ( ಸಿಂಧು ನದಿ ಜಲ ಒಪ್ಪಂದ)ವನ್ನು ಪರಾಮರ್ಶೆಗೆ ಒಳಪಡಿಸಲಿದೆ ಎಂಬ ಸುದ್ದಿಯ ನಡುವೆಯೇ ಒಪ್ಪಂದದ ಸಾಂವಿಧಾನಿಕ, ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಅಡ್ವೋಕೇಟ್ ಎಂಎಲ್ ಶರ್ಮಾ ಪಿಐಎಲ್ ಸಲ್ಲಿಸಿದ್ದು, ತ್ವರಿತ ವಿಚಾರಣೆ ನಡೆಸುವಂತೆ ಕೋರಿದ್ದಾರೆ. ಆದರೆ ಇಷ್ಟು ವರ್ಷ ಎಲ್ಲಿ ಹೋಗಿದ್ರಿ? ಎಂದು ಅರ್ಜಿದಾರರನ್ನು ಪ್ರಶ್ನಿಸಿರುವ ನ್ಯಾ.ಟಿಎಸ್ ಠಾಕೂರ್ ಹಾಗೂ ಎಎಂ ಖಾನ್ವಿಲ್ಕರ್ ತ್ವರಿತ ವಿಚಾರಣೆ ನಡೆಸುವ ಸುಳಿವನ್ನು ನೀಡದೇ ಇತರ ಅರ್ಜಿಗಳಂತೆಯೇ ಇದನ್ನೂ ಪರಿಗಣಿಸುವುದಾಗಿ ಹೇಳಿದೆ.
ಇಂಡಸ್ ಪಾತ್ರದಲ್ಲಿ ಹರಿಯುವ ಬಿಯಾಸ್, ರಾವಿ ಮತ್ತು ಸತ್ಲೆಜ್ ನದಿ ನೀರನ್ನು ಪಾಕಿಸ್ತಾನಕ್ಕೆ ಸೌಹಾರ್ದತೆಯ ದೃಷ್ಟಿಯಿಂದ ಬಿಡುಗಡೆ ಮಾಡಲು 1960ರಲ್ಲಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗು ಪಾಕ್ ಅಧ್ಯಕ್ಷ ಜನರಲ್ ಅಯೂಬ್ ಖಾನ್ ನಡುವೆ ಸಿಂಧು ನದಿ ನೀರು ಹಂಚಿಕೆ ಒಪ್ಪಂದ ನಡೆದಿತ್ತು. ಈಗ ಒಪ್ಪಂದದ ಸಾಂವಿಧಾನಿಕ ಸಿಂಧುತ್ವ, ಕಾನೂನು ಸಿಂಧುತ್ವವನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿದೆ. ಇನ್ನು ಒಪ್ಪಂದವನ್ನು ಪರಾಮರ್ಶೆಗೆ ಒಳಪಡಿಸುವುದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರಿಗಳಿಂದ ಮಾಹಿತಿ ಪಡೆಯಲಿದ್ದು, ಕೇಂದ್ರ ಸರ್ಕಾರದ ತೆಗೆದುಕೊಳ್ಳಲಿರುವ ತೀರ್ಮಾನದ ಬಗ್ಗೆಯೂ ಕುತೂಹಲ ಮೂಡಿದೆ.
Advertisement