ಶ್ರೀನಗರ: ಬ್ಯಾಗ್ ನಲ್ಲಿ 2 ಗ್ರೆನೇಡ್ ಹೊತ್ತು ದೆಹಲಿಗೆ ವಿಮಾನದಲ್ಲಿ ಪ್ರಯಾಣಕ್ಕೆ ಮುಂದಾಗಿದ್ದ ಯೋಧನೋರ್ವನನ್ನು ಕಾಶ್ಮೀರದ ಶ್ರೀನಗರ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಮೂಲಗಳ ಪ್ರಕಾರ ಭಾರತ-ಪಾಕಿಸ್ತಾನ ದೇಶಗಳ ನಡುವಿನ ಗಡಿ ನಿಯಂತ್ರಣ ರೇಖೆ ಉರಿ ಸೆಕ್ಟರ್ ಬಳಿ ಯೋಧ ಕಾರ್ಯ ನಿರ್ವಹಿಸುತ್ತಿದ್ದು, ದೆಹಲಿಗೆ ಆಗಮಿಸುವ ವೇಳೆ ಆತನ ಬ್ಯಾಗ್ ನಲ್ಲಿ 2 ಗ್ರೆನೇಡ್ ಪತ್ತೆಯಾಗಿವೆ. ವಿಮಾನ ನಿಲ್ದಾಣದಲ್ಲಿ ಬ್ಯಾಗ್ ಪರಿಶೀಲನೆ ವೇಳೆ ಇದು ಪತ್ತೆಯಾಗಿದ್ದು, ಅನುಮಾನಗೊಂಡ ಅಧಿಕಾರಿಗಳು ಕೂಡಲೇ ಯೋಧನನ್ನು ವಶಕ್ಕೆ ಪಡೆದಿದ್ದಾರೆ.
ಇನ್ನು ವಿಚಾರಣೆ ವೇಳೆ ಯೋಧ ತನ್ನ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಉದ್ದೇಶ ಪೂರ್ವಕವಾಗಿಯೇ ಗ್ರೆನೇಡ್ ಗಳನ್ನು ತಂದಿದ್ದಾಗಿ ಹೇಳಿಕೊಂಡಿದ್ದಾನೆ. ನದಿಯಲ್ಲಿ ಮೀನುಗಳನ್ನು ಹಿಡಿಯಲು ಗ್ರೆನೇಡ್ ಗಳನ್ನು ತಂದಿದ್ದಾಗಿಯೂ ಹೇಳಿಕೊಂಡಿದ್ದಾನೆ. ಕೆರೆಯಲ್ಲಿ ಗ್ರೆನೇಡ್ ಸ್ಪೋಟಿಸುವುದರಿಂದ ಅದರ ಶಬ್ದಕ್ಕೆ ಮೀನುಗಳು ಚಲ್ಲಾಪಿಲ್ಲಿಯಾಗುತ್ತವೆ. ಆಗ ಮೀನುಗಳನ್ನು ಸುಲಭವಾಗಿ ಹಿಡಿಯಬಹುದು. ಇದೇ ಕಾರಣಕ್ಕೆ ಗ್ರೆನೇಡ್ ಗಳನ್ನು ತಂದಿದ್ದಾಗಿ ಯೋಧ ಹೇಳಿಕೊಂಡಿದ್ದಾನೆ. ಹಿರಿಯ ಅಧಿಕಾರಿಗಳು ತಿಳಿಸಿರುವಂತೆ ಬಂಧಿತ ಯೋಧ ಡಾರ್ಜಲಿಂಗ್ ಮೂಲದವನಾಗಿದ್ದು, ಸೇನಾ ಕ್ಯಾಂಪ್ ನಿಂದ ಗ್ರೆನೇಡ್ ತರಲು ಕಿರಿಯ ಸಹೋದ್ಯೋಗಿಗಳು ನೆರವು ನೀಡಿದ್ದರು ಎಂದು ಹೇಳಿದ್ದಾನೆ.
Advertisement