ವಿಮೆ ಕಂಪನಿಗಳೊಂದಿಗೆ ಮಾತುಕತೆ ವಿಫಲ; ಲಾರಿ ಮುಷ್ಕರ ಮತ್ತಷ್ಟು ತೀವ್ರ!

ವಾಹನಗಳ ವಿಮೆ ಕಂತಿನ ದರದ ಏರಿಕೆಯನ್ನು ಕೈಬಿಡುವಂತೆ ಆಗ್ರಹಿಸಿ ಲಾರಿ ಮಾಲೀಕರ ಸಂಘ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಸೋಮವಾರ ವಿಮಾ ಕಂಪನಿಗಳೊಂದಿಗೆ ನಡೆದ ಮಾತುಕತೆ ವಿಫಲವಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಹೈದರಾಬಾದ್: ವಾಹನಗಳ ವಿಮೆ ಕಂತಿನ ದರದ ಏರಿಕೆಯನ್ನು ಕೈಬಿಡುವಂತೆ ಆಗ್ರಹಿಸಿ ಲಾರಿ ಮಾಲೀಕರ ಸಂಘ ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದ್ದು, ಸೋಮವಾರ ವಿಮಾ ಕಂಪನಿಗಳೊಂದಿಗೆ ನಡೆದ ಮಾತುಕತೆ ವಿಫಲವಾಗಿದೆ.

ವಿಮಾ ಕ್ಷೇತ್ರ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎ) ಅಧ್ಯಕ್ಷ ಪಿ.ಎಸ್‌.ವಿಜಯ್‌ ಅವರು ‘ದಕ್ಷಿಣ ವಲಯ ಲಾರಿ ಮಾಲೀಕರ ಕ್ಷೇಮಾಭಿವೃದ್ಧಿ  ಸಂಘ’ದ ಮುಖಂಡರೊಂದಿಗೆ ಹೈದರಾಬಾದ್‌ನಲ್ಲಿ ಸೋಮವಾರ  ನಡೆಸಿದ ಸಂಧಾನ ವಿಫಲವಾಗಿದ್ದು, ಇದೀಗ ಲಾರಿ ಮುಷ್ಕರ  ಮತ್ತಷ್ಟು ತೀವ್ರಗೊಂಡಿದೆ. ವಾಹನಗಳ ವಿಮೆ ಕಂತಿನ ದರದ ಏರಿಕೆಯನ್ನು ಕೈಬಿಡುವಂತೆ ಮುಖಂಡರು ಒಕ್ಕೊರಲಿನಿಂದ ಮನವಿ ಮಾಡಿದ್ದರು. ಆ ಮನವಿಗೆ ಐಆರ್‌  ಡಿಎ ಅಧ್ಯಕ್ಷರು ಸ್ಪಂದಿಸದ ಕಾರಣ ಮುಷ್ಕರವನ್ನು ಮುಂದುವರಿಸಲು ಲಾರಿ ಮಾಲೀಕರು ನಿರ್ಧರಿಸಿದ್ದಾರೆ.

ಇನ್ನು ಈ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ‘ಅಖಿಲ ಭಾರತ ಮೋಟಾರ್‌ ಟ್ರಾನ್ಸ್‌ಪೋರ್ಟ್‌ ಕಾಂಗ್ರೆಸ್‌’ ಸಂಘಟನೆ ಸದಸ್ಯರು ಮಂಗಳವಾರದಿಂದ ಲಾರಿಗಳನ್ನು ದಕ್ಷಿಣದ ರಾಜ್ಯಗಳಿಗೆ ಕಳುಹಿಸದಿರಲು  ತೀರ್ಮಾನಿಸಿದ್ದೇವೆ ಎಂದು ಹೇಳಿದ್ದಾರೆ. ಸಂಘಟನೆಯ ಈ ನಿರ್ಧಾರದಿಂದ ಉತ್ತರ ಭಾರತದಿಂದ ಬರುತ್ತಿದ್ದ ವಸ್ತುಗಳ ಸಾಗಣೆ ಸಂಪೂರ್ಣ ಸ್ಥಗಿತವಾಗಲಿದೆ. ಅಲ್ಲದೇ ತಮ್ಮ ಈ ಮುಷ್ಕರಕ್ಕೆ ಬೆಂಬಲ ನೀಡುವಂತೆ ಎಪಿಎಂಸಿ  ವರ್ತಕರ ಸಂಘಕ್ಕೆ ಪತ್ರ ಬರೆದು ಮನವಿ ಮಾಡಲಾಗಿದೆ.

ಇನ್ನು ಈ ಪತ್ರಕ್ಕೆ ಸ್ಪಂದಿಸಿರುವ ಎಪಿಎಂಸಿ ವರ್ತಕರ ಸಂಘ, ‘ಮುಷ್ಕರಕ್ಕೆ ಬೆಂಬಲ ನೀಡುವಂತೆ ಲಾರಿ ಮಾಲೀಕರ ಸಂಘದವರು ಪತ್ರ ಬರೆದಿದ್ದಾರೆ. ನಮಗೆ ರೈತರು ಮುಖ್ಯ. ಹೀಗಾಗಿ ಪದಾಧಿಕಾರಿಗಳ ಸಭೆ ನಡೆಸಿದ ಬಳಿಕವಷ್ಟೇ  ಬೆಂಬಲ ನೀಡುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಸ್ಪಷ್ಟಪಡಿಸಿದೆ.

ಇನ್ನು ಲಾರಿ ಮುಷ್ಕರದ ಹಿನ್ನಲೆಯಲ್ಲಿ ಬೆಂಗಳೂರಿನ ಯಶವಂತಪುರದ ಎಪಿಎಂಸಿಗೆ ಮುಷ್ಕರದ ಬಿಸಿ ತಟ್ಟಿದ್ದು, ಬೆಳಿಗ್ಗೆಯಿಂದ ಲಾರಿಗಳು ಸಾಲುಗಟ್ಟಿ ನಿಂತಿವೆ. ಜತೆಗೆ ಕೃಷಿ ಉತ್ಪನ್ನಗಳು ಸಾಗಣೆಯಾಗದೆ ಉಳಿದಿರುವುದರಿಂದ  ಮಾರುಕಟ್ಟೆಯ ವರ್ತಕರು, ಉತ್ಪನ್ನಗಳನ್ನು ತರದಂತೆ ರೈತರಿಗೆ ಹೇಳುತ್ತಿದ್ದಾರೆ.

ಅಗತ್ಯ ವಸ್ತುಗಳ ಸಾಗಟ ಸ್ಥಗಿತ, ಕೆಲವೇ ದಿನಗಳಲ್ಲಿ ಬೆಲೆ ಏರಿಕೆ
ಇನ್ನು ವಿವಿಧ ರಾಜ್ಯಗಳಿಂದ ರಾಜ್ಯಕ್ಕೆ ಬರಬೇಕಿದ್ದ ಅಗತ್ಯ ವಸ್ತುಗಳ ಪೂರೈಕೆ ಸ್ಥಗಿತವಾಗಿದ್ದು, ಅಕ್ಕಿ, ಬೇಳೆ ಕಾಳು, ಸಕ್ಕರೆ,  ದಿನಸಿ ವಸ್ತುಗಳು, ಕೋಳಿ ಹಾಗೂ ಮೊಟ್ಟೆ, ಹಣ್ಣು–ತರಕಾರಿ,  ಹಾಲು ಹಾಗೂ ಹಾಲಿನ ಉತ್ಪನ್ನಗಳು  ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹೀಗಾಗಿ ಉಳಿದಿರುವ ಪದಾರ್ಥಗಳಿಗೆ ಬೇಡಿಕೆ ಹೆಚ್ಚಾದರೆ ಅನಿವಾರ್ಯವಾಗಿ ಬೆಲೆ ಏರಿಕೆ ಮಾಡಬೇಕಾಗುತ್ತದೆ ಎಂದು ವರ್ತಕರೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com