ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದ್ದು ಮುಖ್ಯಮಂತ್ರಿಗಳು ತಮ್ಮ ವಿರುದ್ಧ ಕಾನೂನು ಶುಲ್ಕವನ್ನು ತಮ್ಮ ಸ್ವಂತ ಹಣದಿಂದ ತುಂಬಬೇಕೆ ಹೊರತು ಸರ್ಕಾರಿ ಬೊಕ್ಕಸದಿಂದಲ್ಲ ಎಂದು ಹೇಳಿದೆ.
ಕೇಜ್ರಿವಾಲ್ ತಮ್ಮ ಮೇಲಿರುವ ಮಾನನಷ್ಟ ಮೊಕದ್ದಮೆಗಾಗಿ ಮಾಜಿ ಕೇಂದ್ರ ಸಚಿವ ರಾಮ್ ಜೇಠ್ಮಲಾನಿಗೆ ಸುಮಾರು 3.42 ಕೋಟಿ ರುಪಾಯಿಯನ್ನು ನೀಡಬೇಕಿದ್ದು ಇದಕ್ಕಾಗಿ ಕೇಜ್ರಿವಾಲ್ ಸರ್ಕಾರಿ ಬೊಕ್ಕಸದಿಂದ ಹಣ ನೀಡಲು ಮುಂದಾಗಿದ್ದು ಇದರ ವಿರುದ್ಧ ಕಾಂಗ್ರೆಸ್ ಮುಖಂಡ ಶರ್ಮಿಷ್ಠ ಮುಖರ್ಜಿ ಕಿಡಿಕಾರಿದ್ದಾರೆ.
ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಕಾರಣಕ್ಕೆ ಅವರು ಕೇಜ್ರಿವಾಲ್ ಮೇಲೆ ಮಾನನಷ್ಟ ಮೊಕದ್ದಮೆ ಹೂಡಿದ್ದು ಇದು ಅವರ ಖಾಸಗಿ ಪ್ರಕರಣವಾಗಿದ್ದು ದೆಹಲಿ ಜನತೆ ಕಟ್ಟಿರುವ ಕಂದಾಯ ಹಣದಲ್ಲಿ ಈ ಶುಲ್ಕವನ್ನು ಪಾವತಿಸುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ ಅರವಿಂದ್ ಕೇಜ್ರಿವಾಲ್ ರ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಪ್ರಕರಣ ದಾಖಲಾಗಿರುವುದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹೀಗಾಗಿ ಸರ್ಕಾರ ಬೊಕ್ಕಸದಿಂದ ಹಣ ಪಾವತಿಸಿದರೇ ತಪ್ಪೇನಿಲ್ಲ ಎಂದು ಹೇಳಿದೆ.